ಕುಷ್ಟಗಿ: ತಾಲೂಕಿನ ತಳುವಗೇರಾ ಗ್ರಾಮದ ಶರಣಬಸವೇಶ್ವರ ದೇವಸ್ಥಾನ ಮುಂದಿರುವ ಅಂಗನವಾಡಿ ಮೂರನೇ ಕೇಂದ್ರದ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಆದರೂ ಅದರಲ್ಲಿಯೇ ಕೇಂದ್ರ ನಡೆಸುತ್ತಿರುವುದು ಆತಂಕ ಮೂಡಿಸಿದೆ.
ಸುಮಾರು ವರ್ಷಗಳ ಹಿಂದೆ ನಿರ್ಮಿಸಿರುವ ಕಟ್ಟಡದ ಛಾವಣಿಗೆ ಸಿಮೆಂಟ್ನ ಶೀಟ್ ಅಳವಡಿಸಲಾಗಿದೆ. ಮಳೆ ಬಂದಾಗ ನೀರು ತೊಟ್ಟಿಕ್ಕುವುದರಿಂದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಟ್ಟಡ ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರಾದರೂ ಈವರೆಗೆ ಬೇರೆಡೆ ಸ್ಥಳಾಂತರಿಸಿಲ್ಲ. ಹೀಗಾಗಿ ಭಯದ ವಾತಾವರಣದಲ್ಲಿ ಮಕ್ಕಳು ಕಲಿಯುವಂತಾಗಿದೆ.
ದುರಸ್ತಿಗೆ 50ಸಾವಿರ ರೂ.ಖರ್ಚು!: ಕಟ್ಟಡ ನಿರುಪಯುಕ್ತ ಎಂಬುದು ಗೊತ್ತಿದ್ದರೂ 2018-19ನೇ ಸಾಲಿನ ಅಂಗನವಾಡಿ ಕೇಂದ್ರಗಳ ದುರಸ್ತಿ ಅನುದಾನ ಪೈಕಿ 50 ಸಾವಿರ ರೂ. ಮಂಜೂರು ಮಾಡಲಾಗಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಕಾಮಗಾರಿ ಅನುಷ್ಠಾನಗೊಳಿಸಿದೆ ಎಂದು ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ. ಈವರೆಗೆ ಕೇಂದ್ರದ ಕಟ್ಟಡ ದುರಸ್ತಿಗೆ ಸಂಬಂಧಿಸಿದ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದು, ಕಟ್ಟಡದ ಸದ್ಯದ ಸ್ಥಿತಿ ಪುಷ್ಠಿ ನೀಡುವಂತಿದೆ.
ತಳುವಗೇರಾದ ಅಂಗನವಾಡಿ ಮೂರನೇ ಕೇಂದ್ರದ ಕಟ್ಟಡ ನೆಲಸಮಗೊಳಿಸಲು ಗ್ರಾಪಂ ಹಾಗೂ ಇಲಾಖೆಯಿಂದ ಜಿಪಂ ಉಪ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರ ಸ್ಥಳಾಂತರಿಸಲು ಬಾಡಿಗೆ ಕಟ್ಟಡ ನೋಡಲಾಗುತ್ತಿದೆ.
| ನಾಗಮ್ಮ ಗುಂಡೂರು ವಲಯ ಮೇಲ್ವಿಚಾರಕಿ
ತಳುವಗೇರಾ ಗ್ರಾಮದ ಅಂಗನವಾಡಿ ಕಟ್ಟಡ ನೆಲಸಮಗೊಳಿಸುವ ಸಂಬಂಧ ಗ್ರಾಪಂಯಿಂದ ಬಂದ ಪತ್ರ ಹಾಗೂ ಕಟ್ಟಡ ದುರಸ್ತಿ ಕಾಮಗಾರಿ ಕೈಗೊಂಡ ಬಗ್ಗೆ ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
| ಕೈಲಾಶ ಅನ್ವರ ಎಇಇ, ಜಿಪಂ ಉಪ ವಿಭಾಗ ಕುಷ್ಟಗಿ