ಕುಷ್ಟಗಿ: ಹೊರಗಡೆಯಿಂದ ಔಷಧ ತರುವಂತೆ ಚೀಟಿ ಬರೆದುಕೊಡುತ್ತಿದ್ದ ತಾಲೂಕು ಆಸ್ಪತ್ರೆಯ ವೈದ್ಯರು, ಈಗ ಮೂತ್ರ, ರಕ್ತ ತಪಾಸಣೆಗೂ ಖಾಸಗಿ ಕೇಂದ್ರಗಳಿಗೆ ತೆರಳುವಂತೆ ಸೂಚಿಸುತ್ತಿರುವ ಬಗ್ಗೆ ಆರೋಪ ಕೇಳಿಬರತೊಡಗಿದೆ.
ಎಲ್ಲಾದರೂ ತಪಾಸಣೆ ಮಾಡಿಸಿಕೊಂಡು ಬರಲು ಹೇಳದೆ ನಿರ್ದಿಷ್ಟ ತಪಾಸಣೆ ಕೇಂದ್ರಕ್ಕೆ ತೆರಳುವಂತೆ ಸೂಚಿಸುವುದರ ಜತೆ, ಖಾಸಗಿ ತಪಾಸಣಾ ಕೇಂದ್ರದ ಹೆಸರನ್ನೂ ಚೀಟಿಯಲ್ಲಿ ಬರೆದು ಕಳುಹಿಸುತ್ತಿರವುದರಿಂದ ಕಮಿಷನ್ ದಂಧೆ ನಡೆಯುತ್ತಿರಬಹುದು ಎಂಬ ಗುಮಾನಿ ಹರಿದಾಡತೊಡಗಿದೆ.
ಆಸ್ಪತ್ರೆಗೆ ಔಷಧ ಪೂರೈಕೆಯಾಗುತ್ತಿದ್ದರೂ, ಜನರಿಕ್ ಔಷಧ ಕೇಂದ್ರ ಇದ್ದರೂ ಖಾಸಗಿ ಔಷಧ ಕೇಂದ್ರಗಳಲ್ಲಿ ಮೆಡಿಷಿನ್ ಖರೀದಿಸುವಂತೆ, ರಕ್ತ, ಮೂತ್ರ ತಪಾಸಣೆ ಮಾಡಿಸಿಕೊಂಡು ಬರುವಂತೆ ಹೇಳುತ್ತಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ಪರದಾಡುವಂತಾಗಿದೆ.
ತಾಲೂಕು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲ್ಯಾಬ್ ಸಿಬ್ಬಂದಿಗೆ ಸೇರಿದ ತಪಾಸಣೆ ಕೇಂದ್ರ ಆಸ್ಪತ್ರೆಯ ಎದುರುಗಡೆ ಇದೆ. ವೈದ್ಯರೂ ಸಹ ಚೀಟಿಯಲ್ಲಿ ಆ ಹೆಸರನ್ನೇ ಬರೆದು ಕಳುಹಿಸುತ್ತಿದ್ದಾರೆ. ಪಟ್ಟಣದಲ್ಲಿ ಬೇರೆ ಕೇಂದ್ರಗಳಿದ್ದರೂ ನಿರ್ದಿಷ್ಟ ಕೇಂದ್ರಕ್ಕೆ ಹೋಗಬೇಕು ಎಂದು ವೈದ್ಯರು ತಾಕೀತು ಮಾಡುತ್ತಿದ್ದಾರೆ ಎಂದು ರೋಗಿಗಳು ದೂರುತ್ತಿದ್ದಾರೆ.
**ಕೋಟ್
ನನ್ನ ಪತ್ನಿಯ ಆರೋಗ್ಯ ಪರೀಕ್ಷಿಸಿದ ಸ್ತ್ರೀ ರೋಗ ತಜ್ಞೆ ಚಂದ್ರಕಲಾ ಅವರು, ರಕ್ತ ಪರೀಕ್ಷೆಗೆ ಚೀಟಿಕೊಟ್ಟರು. ಅದನ್ನು ತೆಗೆದುಕೊಂಡು ಪರಿಚಯದವರ ಲ್ಯಾಬ್ಗೆ ತೆರಳಿದೆವು. ಆದರೆ, ಚೀಟಿಯಲ್ಲಿ ಆಸ್ಪತ್ರೆಯ ಎದುರಿಗಿರುವ ಗುರುಕೃಪ ಲ್ಯಾಬ್ ಹೆಸರು ಬರೆದಿರುವುದು ಗೊತ್ತಾಯಿತು. ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯ ಇದ್ದಾಗ್ಯೂ, ಚೀಟಿ ಬರೆದು ಹೊರಗಡೆ ಹೋಗುವಂತೆ, ಅದರಲ್ಲೂ ತಾವು ಸೂಚಿಸಿದ ಲ್ಯಾಬ್ಗೆ ಹೋಗುವಂತೆ ಹೇಳುವುದು ಸರಿ ಎನಿಸಲಿಲ್ಲ.
ಸೋಮಶೇಖರ ಸೂಡಿ
ಗರ್ಭಿಣಿ ಸುಮಾ ಪತಿ, ಕುಷ್ಟಗಿ
** ಕೋಟ್
ರಕ್ತ ಹಾಗೂ ಮೂತ್ರ ತಪಾಸಣೆಯ ಎಲ್ಲ ಸೌಲಭ್ಯಗಳೂ ತಾಲೂಕು ಆಸ್ಪತ್ರೆಯಲ್ಲಿ ಲಭ್ಯ ಇವೆ. ಹೊರಗಡೆ ಚೀಟಿ ಬರೆದು ಕೊಡುವಂತಿಲ್ಲ. ಈ ಕುರಿತು ವೈದ್ಯರನ್ನು ವಿಚಾರಿಸಿ, ಇಂಥ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು.
ಡಾ.ಆನಂದ ಗೋಟೂರು
ಕುಷ್ಟಗಿ ತಾಲೂಕು ವೈದ್ಯಾಧಿಕಾರಿ