ಶಿರ್ವ: ಪಾಜಕ ಸಮೀಪದ ಕುಂಜಾರುಗಿರಿಯ ಗಿರಿಜಾ ಹಿರಿಯ ಪ್ರಾಥಮಿಕ ಶಾಲೆಯ ಪಶ್ಚಿಮ ದಿಕ್ಕಿನಲ್ಲಿ ಬೃಹತ್ ಶಿಲಾಯುಗ ಕಾಲಕ್ಕೆ ಸೇರಿದ ನಿಲಿಸುಗಲ್ಲು ಮಾದರಿಯ ಸಮಾಧಿಯನ್ನು ಪಡುಬೆಳ್ಳೆಯ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ರಿಚಾರ್ಡ್ ದಾಂತಿ ಪಾಂಬೂರು ಮತ್ತು ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಪತ್ತೆ ಮಾಡಿದ್ದಾರೆ.
ಸಮಾಧಿ ನೆಲದಿಂದ 7ಅಡಿಯಷ್ಟು ಎತ್ತರವಿದ್ದು, ಈ ಮಾದರಿಯ ಸಮಾಧಿಯು ಇದೇ ಮೊದಲ ಬಾರಿಗೆ ಈ ಪರಿಸರದಲ್ಲಿ ಪತ್ತೆಯಾಗಿದೆ. ಬೃಹತ್ ಶಿಲಾಯುಗಕ್ಕೆ ಸೇರಿದ ಕಂಡಿಕೋಣೆ ಮಾದರಿಯ ಸಮಾಧಿಗಳನ್ನು ಈ ಮೊದಲು ಪಡುಬೆಳ್ಳೆ ಪರಿಸರದಲ್ಲಿ ಸಂಶೋಧನಾರ್ಥಿಗಳು ಪತ್ತೆ ಮಾಡಿದ್ದರು.
ಬೃಹತ್ ಶಿಲಾಯುಗದ ಕಾಲಮಾನವನ್ನು ಕರ್ನಾಟಕದಲ್ಲಿ ಪುರಾತತ್ವ ವಿದ್ವಾಂಸರು ಕ್ರಿ.ಪೂ. 1000-2000 ಎಂದು ಅಂದಾಜಿಸಿದ್ದಾರೆ. ಈ ನೆಲೆಯಿಂದ 150 ಮೀಟರ್ಗಳಷ್ಟು ಪೂರ್ವದಿಕ್ಕಿನಲ್ಲಿ 1925ರ ಕಾಲಮಾನಕ್ಕೆ ಸೇರಿದ ಒಂದು ಶಿಲಾಸ್ತಂಭ ಶಾಸನವನ್ನು ಪತ್ತೆ ಮಾಡಲಾಗಿದೆ. ಶಾಸನವು 6 ಸಾಲುಗಳಿಂದ ಕೂಡಿದ್ದು, ಇದರಲ್ಲಿ ಅನಂತ ಕೃಷ್ಣ ಎಂಬ ಉಲ್ಲೇಖ ಕಂಡು ಬರುತ್ತದೆ ಸಂಶೋಧಿನಾರ್ಥಿಗಳು ತಿಳಿಸಿದ್ದಾರೆ.