More

    ಭೀಕರ ಅಪಘಾತದಲ್ಲಿ ದಂಪತಿ ಸೇರಿ ಮೂವರ ಸಾವು: ಪವಾಡವೆಂಬಂತೆ ಬದುಕುಳಿದ ಮಗು!

    ಶಿವಮೊಗ್ಗ/ಕುಂದಾಪುರ: ಶಿವಮೊಗ್ಗ ಜಿಲ್ಲೆಯ ಲಕ್ಕವಳ್ಳಿ ಸಮೀಪ ಶನಿವಾರ ಮಧ್ಯಾಹ್ನ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದಂಪತಿ ಸೇರಿ ಮೂವರು ಮೃತಪಟ್ಟಿದ್ದು, 11 ತಿಂಗಳ ಮಗು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದೆ. ಮತ್ತೊಂದು ಕಾರಿನಲ್ಲಿದ್ದ ಕರಕುಚ್ಚಿ ಗ್ರಾಮದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಮೃತರನ್ನು ಕುಂದಾಪುರ ತಾಲೂಕಿನ ನೇರಂಬಳ್ಳಿ ನಿವಾಸಿ ಅನಿಲ್‌ಕುಮಾರ್(30) ಅವರ ಪತ್ನಿ ಸುಜೀತಾ (26) ಮತ್ತು ಕೋಡಿ ಗ್ರಾಮದ ನಾಗೇಂದ್ರ (26) ಎಂದು ಗುರುತಿಸಲಾಗಿದೆ. ಅನಿಲ್‌ಕಮಾರ್-ಸುಜಾತಾ ದಂಪತಿಯ 11ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದೆ.

    ಲಕ್ಕವಳ್ಳಿ ಸಮೀಪದ ಹಲಸೂರು ಮತ್ತು ರಂಗೇನಹಳ್ಳಿ ಗ್ರಾಮಗಳ ನಡುವಿನ ಕೆರೆ ಏರಿ ಮೇಲೆ ಮುಖಾಮುಖಿ ಅಪಘಾತ ಸಂಭವಿಸಿದ್ದು, ಕಾರಿನ ಚಾಲಕ ಕುಂದಾಪುರದ ನಾಗೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅನಿಲ್‌ಕುಮಾರ್ ಮತ್ತು ಸುಜೀತಾ ಅವರನ್ನು ತಕ್ಷಣವೇ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಸಾಗಿಸಲಾಗಿತ್ತು. ದಂಪತಿ ಚಿಕಿತ್ಸೆಗೆ ಸ್ಪಂದಿಸದೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಘಾತದ ರಭಸಕ್ಕೆ ಒಂದು ಕಾರು ರಸ್ತೆ ಮಧ್ಯೆ ನಜ್ಜುಗುಜ್ಜಾಗಿ ನಿಂತಿದ್ದರೆ, ಮತ್ತೊಂದು ಕಾರು ಕೆರೆ ಏರಿಯ ತಡೆಗೋಡೆಗೆ ಅಪ್ಪಳಿಸಿ ಸಿಲುಕಿಕೊಂಡಿದೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಆಶ್ಚರ್ಯಕರ ರೀತಿ ಪಾರಾಗಿರುವ 11 ತಿಂಗಳ ಮಗುವನ್ನು ತರೀಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಾನಸ ಆರೈಕೆ ಮಾಡಿ ಸಂಜೆ ಪೋಷಕರ ವಶಕ್ಕೆ ಒಪ್ಪಿಸಿದರು.

    ಬಸ್ ಪ್ರಯಾಣ ರದ್ದು: ಕುಂದಾಪುರದ ಅನಿಲ್‌ಕುಮಾರ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಬಸ್ಸಿನಲ್ಲಿ ತೆರಳಲು ಟಿಕೆಟ್ ಕಾಯ್ದಿರಿಸಿದ್ದರು. ಈ ನಿರ್ಧಾರ ಬದಲಾವಣೆ ಮಾಡಿ ಕಾಯ್ದಿರಿಸಿದ್ದ ಟಿಕೆಟ್ ರದ್ದುಪಡಿಸಿಕೊಂಡ ಅವರು ಶನಿವಾರ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದರು. ಅನಿಲ್‌ಕುಮಾರ್ ಅವರ ಚಿಕ್ಕಪ್ಪನ ಮಗ ನಾಗೇಂದ್ರ ಕಾರು ಚಾಲನೆ ಮಾಡುತ್ತಿದ್ದರು.

    ತಾಯಿ ಮನೆಗೆ ಭೇಟಿ: ತೀರ್ಥಹಳ್ಳಿ ತಾಲೂಕು ಹಿಳಿಕೆರೆ ಗ್ರಾಮದ ಸುಜೀತಾ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇಲೆಕ್ಟ್ರಿಕಲ್ ಗುತ್ತಿಗೆದಾರ ಕುಂದಾಪುರದ ಅನಿಲ್ ಅವರನ್ನು ವಿವಾಹವಾಗಿದ್ದರು. ಕುಂದಾಪುರಕ್ಕೆ ಆಗಮಿಸಿದ್ದ ಅವರು ಬೆಂಗಳೂರಿಗೆ ಹೊರಟಿದ್ದರು. ಸುಜೀತಾ ಅವರ ತಾಯಿ ಗ್ರಾಪಂ ಚುನಾವಣೆಯಲ್ಲಿ ಪರಾಭವಗೊಂಡಿದ್ದು, ಅವರನ್ನು ಮಾತನಾಡಿಸಿಕೊಂಡು ಬೆಂಗಳೂರಿಗೆ ತೆರಳಬೇಕು ಎಂದು ನಿರ್ಧರಿಸಿದ್ದರಿಂದ ಬಸ್ ಪ್ರಯಾಣ ರದ್ದುಪಡಿಸಿ ಕಾರಿನಲ್ಲಿ ಹೊರಟಿದ್ದರು. ಬೆಳಗ್ಗೆ ಹಿಳಿಕೆರೆಗೆ ತೆರಳಿದ್ದ ಕುಟುಂಬ, ಚುನಾವಣೆಯಲ್ಲಿ ಪರಾಭವಗೊಂಡಿದ್ದ ಸುಜೀತಾ ಅವರ ತಾಯಿಗೆ ಸಮಾಧಾನ ಹೇಳಿ ಅಲ್ಲಿಂದ ಬೆಂಗಳೂರಿಗೆ ಹೊರಟಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts