ಕೆ.ಆರ್.ಪೇಟೆ: ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಮಹಾ ಕುಂಭಮೇಳದ ಅಂಗವಾಗಿ ಶುಕ್ರವಾರ ರಾತ್ರಿ ನಡೆದ ಗಂಗಾರತಿ ಹಾಗೂ ಲೇಸರ್ ಶೋ ಪ್ರದರ್ಶನ ಆಕರ್ಷಣೀಯವಾಗಿತ್ತು.
ಮೊದಲಿಗೆ ಚಿಲುಮೆಯ ನೀರಿನಲ್ಲಿ ಲೇಸರ್ ಶೋ ಪ್ರದರ್ಶನ ನಡೆಯಿತು. ಸಂಗೀತದ ತಾಳಕ್ಕೆ ಅನುಗುಣವಾಗಿ ಚಿಮ್ಮುತ್ತಿದ್ದ ಚಿಲುಮೆ ನೀರು ಹಾಗೂ ಲೇಸರ್ ಲೈಟ್ಗಳು ನೃತ್ಯ ಪ್ರದರ್ಶನ ನೀಡಿದವು. ಶೋನಲ್ಲಿ ನಾಡು-ನುಡಿ, ಜಿಲ್ಲೆಗೆ ಸಂಬಂಧಿಸಿದ ಚಿತ್ರಗಳು ಅನಾವರಣಗೊಂಡವು.
ವಿಶೇಷವಾಗಿ ಲೇಸರ್ ಲೈಟ್ನಲ್ಲಿ ನಟ ಪುನೀತ್ರಾಜ್ಕುಮಾರ್ ಮೂಡಿಬಂದ ರೀತಿ ಅದ್ಭುತವಾಗಿತ್ತು. ಬೊಂಬೆ ಹೇಳುತೈತೆ… ಮತ್ತೆ ಹೇಳುತೈತೆ… ಹಾಡಿನೊಂದಿಗೆ ಮೂಡಿಬಂದ ಅಪ್ಪು ಭಾವಚಿತ್ರವನ್ನು ಕಂಡು ಮೇಳದಲ್ಲಿ ನೆರೆದಿದ್ದ ಜನರು ಶಿಳ್ಳೆ ಹಾಕಿ ಸಂಭ್ರಮಿಸಿದರು. ಉಳಿದಂತೆ ಹಲವಾರು ಭಕ್ತಿಗೀತೆ, ಭಾವಗೀತೆ, ಚಲನ ಚಿತ್ರಗೀತೆಗಳು ಲೇಸರ್ ಲೈಟ್ನಲ್ಲಿ ಪ್ರದರ್ಶನಗೊಂಡವು.
ಭಕ್ತಿ ಅನಾವರಣ: ಲೇಸರ್ ಶೋ ಮುಕ್ತಾಯದ ಬಳಿಕ ನಡೆದ ವಾರಣಾಸಿ ಮಾದರಿ ಗಂಗಾರತಿ ಭಕ್ತಿಯ ಅನಾವರಣಕ್ಕೆ ಸಾಕ್ಷಿಯಾಯಿತು. ವಾರಣಾಸಿ ಮೂಲದ ರಣದೀರ್ ಪಾಂಡೆ ನೇತೃತ್ವದ 7 ಜನ ಆಚಾರ್ಯರ ತಂಡದಿಂದ ಗಂಗಾರತಿ ನೆರವೇರಿತು. ಧೂಪ, ಲೋಬಾನ, ಕರ್ಪೂರ, ಸಾಂಬ್ರಾಣಿ ಬಳಸಿ ವಿಶೇಷ ಆರತಿ ನೆರವೇರಿಸಿದರು. ನದಿ ದಡದಲ್ಲಿ ನಿರ್ಮಿಸಲಾಗಿರುವ ವಿಶೇಷ ವೇದಿಕೆಯಲ್ಲಿ ಶಂಖನಾದ ಮೂಲಕ ನಾಗಾರತಿ ಹಾಗೂ ಗಂಗಾರತಿ ನೆರವೇರಿಸಿದರು. ಈ ವೇಳೆ ಗಂಗಾ ನಾದಘೋಷಗಳು ಮೊಳಗಿದವು.
ಶ್ರೀ ನಿರ್ಮಲಾನಂದನಾಥ ಸ್ವಾಮಿಜಿ, ಸಚಿವ ಕೆ.ಸಿ.ನಾರಾಯಣಗೌಡ, ಡಿಸಿ ಅಶ್ವಥಿ, ಎಡಿಸಿ ನಾಗರಾಜು, ಎಸಿ ಶಿವಾನಂದಮೂರ್ತಿ, ತಹಸೀಲ್ದಾರ್ ಎಂ.ವಿ.ರೂಪಾ ಇತರರಿದ್ದರು.