ಹಿರಿಯ ವಕೀಲ ತಿಪ್ಪೆರುದ್ರಸ್ವಾಮಿ ಹೇಳಿಕೆ | ಧರಣಿಗೆ ಸ್ವಾಮೀಜಿಗಳ ಬೆಂಬಲ
ಕುಕನೂರು: ಗುದ್ನೇಶ್ವರ ಮಠದ ಆಸ್ತಿಯಲ್ಲಿ ಸೂಜಿಯ ಮೊನೆಯಷ್ಟು ಜಾಗ ಬಿಟ್ಟು ಕೊಡುವುದಿಲ್ಲ ಎಂದು ಹಿರಿಯ ವಕೀಲ ತಿಪ್ಪೆರುದ್ರಸ್ವಾಮಿ ಹೇಳಿದರು.
ಪಟ್ಟಣದ ಗುದ್ನೇಶ್ವರ ಮಠದಲ್ಲಿ ದೇವಸ್ಥಾನ ಜಮೀನು ಉಳಿಕೆಗಾಗಿ ಗ್ರಾಮಸ್ಥರು ಕೈಕೊಂಡ ಧರಣಿ ಬೆಂಬಲಿಸಿ ಶನಿವಾರ ಮಾತನಾಡಿದರು.
ಅಕ್ರಮ ಮಾರ್ಗದ ಮೂಲಕ ಈ ಹಿಂದೆ ನವೋದಯ ಶಾಲೆ, ಐಟಿಐ ಕಾಲೇಜು, ಕೆಎಲ್ಇ ಕಾಲೇಜು ನಿರ್ಮಾಣಕ್ಕೆ ಗುದ್ನೇಶ್ವರ ಮಠದ 60 ಎಕರೆ ಜಮೀನು ಕಬಳಿಸಲಾಗಿದೆ.
ಜಮೀನು ಅಕ್ರಮ ಪರಬಾರೆ ಆಗಿರುವ ಬಗ್ಗೆ ಸ್ಪಷ್ಟವಾಗಿ ಗೊತ್ತಾಗಿದೆ. ಜಮೀನು ದೇವಸ್ಥಾನಕ್ಕೆ ಸೇರಿದ್ದು, ಮುಜರಾಯಿ ಇಲಾಖೆಗೆ ಒಳಪಟ್ಟ ದಾಖಲೆ ಇಲ್ಲ. ಆಗಿನ ಕುಂತಳ ನಗರದ ರಾಜ ಈ 188 ಎಕರೆ ಜಮೀನು ನೀಡಿದ್ದಾರೆ. ಇನ್ನು ಮುಂದೆ ಯಾವುದೇ ಜಾಗವನ್ನು ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಬಿಟ್ಟು ಕೊಡುವುದಿಲ್ಲ ಎಂದರು.
ನೀಲಗುಂದ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ಇದೊಂದು ಎಂಟು ನೂರು ವರ್ಷಗಳ ಇತಿಹಾಸ ಇರುವ ದೇವಸ್ಥಾನ. ಇದರ ಜಾಗ ಕಬಳಿಸಲು ಮುಂದಾದರೆ ಅವನತಿ ಹೊಂದುತ್ತಾರೆ. ಜಾಗ ಉಳಿಸಿಕೊಳ್ಳಲು ಮಾಡುತ್ತಿರುವ ಹೋರಾಟ ಮುಂದುವರಿಸಬೇಕು ಎಂದು ತಿಳಿಸಿದರು.
ಯಲಬುರ್ಗಾ ಹಿರೇಮಠದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ, ಅನ್ನದಾನೇಶ್ವರ ಶಾಖಾ ಮಠದ ಡಾ.ಮಹಾದೇವ ದೇವರು, ಪಪಂ ಸದಸ್ಯರಾದ ಬಾಲರಾಜ ಗಾಳಿ, ಮಹಾಂತೇಶ್ ಹೂಗಾರ,
ಸಿದ್ದಯ್ಯ ಉಳ್ಳಾಗಡ್ಡಿ, ಜಗನ್ನಾಥ ಭೋವಿ, ಪ್ರಮುಖರಾದ ಶಿವಕುಮಾರ ನಾಗಲಾಪುರ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರುದ್ರಯ್ಯ ವಿರುಪಣ್ಣ ಇತರರಿದ್ದರು.