ಕೂಡಲಸಂಗಮ: ಮಹಾರಾಷ್ಟ್ರ ಮತ್ತು ಕನ್ನಡಿಗರ ಸಹೋದರತೆಗೆ ಗಡಿ ವಿವಾದದ ನೆಪದಲ್ಲಿ ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿ ಅಜಿತ ಪವಾರ ವಿವಾದಾತ್ಮಕ ಹೇಳಿಕೆ ಕೊಡುವುದರ ಮೂಲಕ ಭಂಗ ಉಂಟು ಮಾಡುತ್ತಿದ್ದಾರೆ. ಶತಮಾನಗಳಿಂದಲೂ ಸಮಸ್ಯೆಯಾಗಿರುವ ಗಡಿ ವಿವಾದವನ್ನು ಸೌಹಾರ್ದತೆಯಿಂದ ಬಗೆಹರಿಸಲು ಎರಡು ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಂಧಾನ ಮಾಡಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬುಧವಾರ ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ನ.1 ರಂದು ಬೆಳಗಾವಿ ನಗರದಲ್ಲಿ ಕೆಲವೊಂದು ಸಂಘಟನೆಗಳು ಕಪ್ಪ್ಪು ಬಾವುಟ ಪ್ರದರ್ಶನ ಮಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಿರಂತರ ಆಗುವ ಈ ವಿವಾದಕ್ಕೆ ತೆರೆ ಎಳೆಯುವ ಕಾರ್ಯಕ್ಕೆ ಪ್ರಧಾನಿಗಳು ಮಧ್ಯಸ್ಥಿಕೆ ವಹಿಸುವುದು ಸೂಕ್ತ ಎಂದರು.