ಬೆಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಕಳೆದುಕೊಂಡು, ಟಿಕೆಟ್ ತನಿಖಾ ಅಧಿಕಾರಿಗಳ ಕೈಗೆ ಸಿಕ್ಕರೆ ಇನ್ನು ದಂಡ ಪಾವತಿಸುವ ಹಾಗಿಲ್ಲ!
ಹೌದು ಇಂತಹ ಒಂದು ಆದೇಶವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿಗಳಿಗೆ ಸೂಚಿಸಿದೆ. ಈಗಾಗಲೇ ಟಿಕೆಟ್ನ್ನು ಪಡೆದು ಕಳೆದುಕೊಂಡಿದ್ದರೆ, ಅಂತಹ ಪ್ರಯಾಣಿಕರಿಗೆ ದಂಡ ವಿಧಿಸುವಂತಿಲ್ಲ. ಹಾಗೂ ನಿರ್ವಾಹಕನಿಗೂ ದಂಡ ವಿಧಿಸುವಂತಿಲ್ಲ.
ಬದಲಾಗಿ ಮತ್ತೊಂದು ಟಿಕೆಟ್ ಪಡೆದು ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಆದರೆ ಇದಕ್ಕೂ ಮುನ್ನ ತನಿಖಾಧಿಕಾರಿಗಳು ಆತ ಟಿಕೆಟ್ ಪಡೆದ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಇದು ಮುಂಗಡ ಕಾಯ್ದಿರಿಸಿದ ಟಿಕೆಟ್ ಆಗಿದ್ದರೆ ಚಾರ್ಟ್ನಿಂದ ಅಥವಾ ಇಟಿಎಂ ಮಷಿನ್ನಿಂದ ಟಿಕೆಟ್ ಪಡೆದಿದ್ದರೆ ಮಷಿನ್ನಿಂದ ಖಾತರಿ ಪಡಿಸಿಕೊಳ್ಳಬೇಕು.
ಹೀಗೆ ಖಾತರಿ ಪಡಿಸಿಕೊಂಡ ಮೇಲೆ ಪ್ರಯಾಣಿಕ ಟಿಕೆಟ್ ಪಡೆದಿದ್ದರೆ, ಆ ಸ್ಥಳದಿಂದ ಆತ ತೆರಳಲಿರುವ ಸ್ಥಳಕ್ಕೆ ಟಿಕೆಟ್ ನೀಡಿ, ಅದರ ಹಣ ಪಡೆಯಬೇಕು ಎಂದು ತನಿಖಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಬಗ್ಗೆ ನಿರ್ವಾಹಕನಿಗೂ ದಂಡ ವಿಧಿಸಬಾರದು ಎಂದು ಸ್ಪಷ್ಟವಾಗಿ ಸೂಚಿಸಿದ ಸುತ್ತೋಲೆಯನ್ನು ನಿಗಮದ ಎಂಡಿ ಶಿವಯೋಗಿ ಕಳಸದ ಹೊರಡಿಸಿದ್ದಾರೆ.