ಶಿವಮೊಗ್ಗ: ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಜಾತಿ ಕುರಿತು ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯದ್ದು ಬೆರಕೆ ಜಾತಿ ಎಂದು ಹೇಳುವ ಮೂಲಕ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಈಶ್ವರಪ್ಪ, ಹಿಂದುಳಿದ ವರ್ಗದ ಜನರನ್ನು ರಾಹುಲ್ ಗಾಂಧಿ ಅವಮಾನಿಸಿದ್ಧಾರೆ. ರಾಹುಲ್ ಗಾಂಧಿಗೆ ಎಷ್ಟು ಜ್ಞಾನವಿದೆ ಎನ್ನುವುದು ಪರೀಕ್ಷೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈತರಿಂದ ದೆಹಲಿ ಚಲೋ; ಪತ್ರಕರ್ತನ ಮೇಲೆ ಗುಂಡು ಹಾರಿಸಿದ ಪೊಲೀಸರು
ಹಿಂದುಳಿದ ವರ್ಗಗಳಿಗೆ ಅವಮಾನ ಮಾಡಿರುವ ರಾಹುಲ್ ಗಾಂಧಿಗೆ ಕಾಂಗ್ರೆಸ್ ನಾಯಕರು ಮೊದಲು ಸರಿಯಾದ ಕ್ಲ್ಯಾಸ್ ತೆಗೆದುಕೊಳ್ಳಬೇಕು. ರಾಹುಲ್ ಗಾಂಧಿಗೆ ಎಷ್ಟು ಜ್ಞಾನವಿದೆ ಎನ್ನುವುದನ್ನು ಮೊದಲು ಪರೀಕ್ಷೆ ಮಾಡಬೇಕಿದೆ. ಇಡೀ ವಿಶ್ವವೇ ಪ್ರಧಾನಿ ಮೋದಿ ಅರವನ್ನು ಒಪ್ಪಿಕೊಂಡಿದ್ದು, ದೇಶದ ಜನ ಅವರ ಜಾತಿಯನ್ನು ನೋಡಿ ಮತ ಹಾಕಿಲ್ಲ.
ಪ್ರಧಾನಿ ಅವರ ಜಾತಿಯನ್ನು ಪ್ರಶ್ನಿಸುವ ರಾಹುಲ್ ಗಾಂಧಿ ಯಾವ ಜಾತಿಗೆ ಸೇರಿದವರು ಎಂದು ಮೊದಲು ಹೇಳಬೇಕು. ನಿಮ್ಮಜ್ಜಿ ಇಂದಿರಾ ಗಾಂಧಿ ಹಾಗೂ ತಾತ ಫಿರೋಜ್ ಖಾನ್ ಹಾಗಾದರೆ ನಿಮ್ಮ ಜಾತಿ ಯಾವುದು. ರಾಹುಲ್ ಗಾಂಧಿ ಅವರೇ ನೀವು ಯಾವ ಜಾತಿ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ. ಮಿಶ್ರ ತಳಿ ಅಥವಾ ಬೆರಕೆ ಜಾತಿನಾ ಎಂದು ಹೇಳಿಕೆ ನೀಡುವ ಮೂಲಕ ಮಾಜಿ ಸಚಿವ, ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ಧಾರೆ.