ವಿಜಯವಾಣಿ ಸುದ್ದಿಜಾಲ ಬಳ್ಳಾರಿ
ಹಿಂಡಲಗಾ ಜೈಲಿನಲ್ಲಿರುವ ಜಯೇಶ್ ಪೂಜಾರಿ ಅಲಿಯಾಸ್ ಶಾಹಿರ್ಶೇಖ್ ನನ್ನ ಕೊಲೆಗೆ ಸ್ಕೆಚ್ ಹಾಕಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಕೆ.ಎಸ್.ಈಶ್ವರಪ್ಪ ಮಾತನಾಡಿದರು. ನಾಗ್ಪುರ್ ಪೊಲೀಸರ ತನಿಖೆ ವಿಚಾರದಲ್ಲಿ ಶಾಹಿರ್ಶೇಖ್ ಬಂಧಿತನಾಗಿದ್ದಾನೆ. ಆತನಿಗೆ ಪಿಎಫ್ಐ ಜತೆಗೆ ಸಂಬಂಧವಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು.
ಈ ಹಿಂದೆ ಇದೇ ಆರೋಪಿ ನಿತಿನ್ ಗಡ್ಕರಿ ಕೊಲೆಗೂ ಸ್ಕೆಚ್ ಹಾಕಿದ್ದ. ನನ್ನ ಕೊಲೆಗೂ ಸ್ಕೆಚ್ ಹಾಕಲಾಗಿದೆ ಎಂಬ ವಿಷಯದ ಬಗ್ಗೆ ಆರಗ ಜ್ಞಾನೇಂದ್ರ ಅವರು ನನಗೆ ಫೋನ್ ಮಾಡಿ ತಿಳಿಸಿದ್ದರು. ಈ ಹಿಂದೆ ಹಿಂದುತ್ವ ಪ್ರತಿಪಾದಿಸಿ ನಾನು ಮಾತಾಡಿದಾಗ ಕೊಲೆ ಬೆದರಿಕೆ ಬಂದಿತ್ತು.
ಈ ವಿಷಯ ಸದನಕ್ಕೆ ತಿಳಿಸಿದ್ದೆ. ಆಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇತ್ತು. ಆಗ ಭದ್ರತೆ ನೀಡಿದ್ದರು. ನನ್ನ ಕೊಲೆ ಸ್ಕೆಚ್ ಬಗ್ಗೆ ಕಾರಣ ಏನೆಂದು ನನಗೆ ಗೊತ್ತಿಲ್ಲ. ಹಿಂದುತ್ವದ ಕಾರಣಕ್ಕೆ ಕೊಲೆಗೆ ಸ್ಕೆಚ್ ಹಾಕುತ್ತಾರೆಂದರೆ ನಾವು ಹೆದರುವವರಲ್ಲ ಎಂದರು.
ಇದನ್ನೂ ಓದಿ: ಸ್ವ ಇಚ್ಛೆಯಿಂದ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದೇನೆ: ಕೆ.ಎಸ್.ಈಶ್ವರಪ್ಪ
ರಾಜಕೀಯ ನಿವೃತ್ತಿ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಮೊನ್ನೆ ರಾಜ್ಯದ ಚುನಾವಣಾ ಪ್ರಭಾರ ಧರ್ಮೇಂದ್ರ ಪ್ರಧಾನ್ ಫೋನ್ ಮಾಡಿದ್ದರು. ಅವರು ಹೇಳಿದಂತೆ ರಾಜೀನಾಮೆ ಪತ್ರ ಕಳುಹಿಸಿದ್ದೇನೆ. ನನಗೆ ಟಿಕೆಟ್ ಸಿಕ್ಕಿಲ್ಲ.
ಆದರೆ, ಯಾರಿಗೆ ಸಿಗಲಿ-ಬಿಡಲಿ. ನನಗೆ ಕೊಡಿ ಎಂದು ಕೇಳಲ್ಲ. ನನಗೆ ಯಾವ ಭರವಸೆಯನ್ನೂ ಕೊಟ್ಟಿಲ್ಲ. ಪಕ್ಷ ನನಗೆ ಸಾಕಷ್ಟು ಅಧಿಕಾರ, ಸ್ಥಾನಮಾನ, ಹುದ್ದೆ ನೀಡಿದೆ. ನಾನು ಬೂತ್ ಮಟ್ಟದಲ್ಲಿ ಕಾರ್ಯಕರ್ತ ಆಗಿದ್ದವನು ಈ ಹಂತಕ್ಕೆ ಬಂದಿರುವೆ.
ಪಕ್ಷ ನನಗೆ ಚುನಾವಣಾ ರಾಜಕೀಯದಿಂದ ನಿವೃತ್ತ ಆಗಬೇಕೆಂದು ಹೇಳಿದರೆ ಅದನ್ನು ನಾನು ಒಪ್ಪುವೆ, ಪಕ್ಷ ನೀಡುವ ಎಲ್ಲ ಕೆಲಸಗಳನ್ನು ಮಾಡುವೆ ಎಂದರು.
ಒಂದು ಕಾಲದಲ್ಲಿ ನಮ್ಮ ಪಕ್ಷದಿಂದ ನಿಲ್ಲಲು ಅಭ್ಯರ್ಥಿಗಳೇ ಇರಲಿಲ್ಲ.
ಈಗ ಟಿಕೆಟ್ ಸಿಕ್ಕಿಲ್ಲ ಎಂದು ಬೇರೆಡೆ ಹೋಗುವುದಾದರೆ ಇದು ಹೆಮ್ಮೆ. ಟಿಕೆಟ್ ಸಿಕ್ಕಿಲ್ಲ ಎಂದು ಬೇರೆ ಪಕ್ಷಕ್ಕೆ ಹೋಗುವವರು ಪಕ್ಷಕ್ಕೆ ನಿಷ್ಠರಲ್ಲ ಎಂದರ್ಥ. ಹೋಗುವವರು ಹೋಗಲಿ, ಅದು ಅವರ ವೈಯಕ್ತಿಕ ತೀರ್ಮಾನ ಎಂದರು.
ಬಳ್ಳಾರಿಯಲ್ಲಿರುವ ಮನೆ ದೇವರ ಪೂಜೆಗಾಗಿ ಈಶ್ವರಪ್ಪ ಅವರು ಕುಟುಂಬ ಸಮೇತ ಬಂದಿದ್ದರು. ಸುದ್ದಿಗೋಷ್ಠಿ ವೇಳೆ ರಾಮಲಿಂಗಪ್ಪ ಮೊದಲಾದವರು ಹಾಜರಿದ್ದರು.