ಮಂಡ್ಯ: ಪ್ರಸಕ್ತ ಸಾಲಿನಲ್ಲಿ ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ 416.65 ಟಿಎಂಸಿ ನೀರು ಹರಿದು ಹೋಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.
ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶದನ್ವಯ ತಮಿಳುನಾಡಿಗೆ ನೀರಿನ ಹರಿವಿನ ಪ್ರಮಾಣದ ಬಗ್ಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಕೇಳಿದ ಪ್ರಶ್ನೆಗೆ ಗುರುವಾರ ಅಧಿವೇಶನದಲ್ಲಿ ಉತ್ತರ ನೀಡಿದ ಸಚಿವರು, ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನಂತೆ ರಾಜ್ಯದಿಂದ ತ.ನಾಡಿಗೆ ಮಾಸಿಕ 177.25 ಟಿಎಂಸಿ ನೀರನ್ನು ಹರಿಸಬೇಕಿದೆ ಎಂದು ತಿಳಿಸಿದರು.
ಇನ್ನು ತಿಂಗಳುವಾರು ಮಾಹಿತಿ ನೀಡಿದ್ದು, ಜನವರಿಯಲ್ಲಿ 2.76 ಟಿಎಂಸಿ ಮತ್ತು ಫೆಬ್ರವರಿಯಲ್ಲಿ 2.50, ಮಾರ್ಚ್ನಲ್ಲಿ 2.50, ಏಪ್ರಿಲ್ನಲ್ಲಿ 2.50, ಮೇನಲ್ಲಿ 2.50, ಜೂನ್ನಲ್ಲಿ 9.19, ಜುಲೈನಲ್ಲಿ 31.24, ಆಗಸ್ಟ್ನಲ್ಲಿ 45.95, ಸೆಪ್ಟೆಂಬರ್ನಲ್ಲಿ 36.76, ಅಕ್ಟೋಬರ್ನಲ್ಲಿ 20.22, ನವೆಂಬರ್ನಲ್ಲಿ 13.78 ಮತ್ತು ಡಿಸೆಂಬರ್ನಲ್ಲಿ 7.35 ಸೇರಿದಂತೆ 177.25 ಟಿಎಂಸಿ ನೀರು ಹರಿಸಬೇಕು. ಅಂತೆಯೇ ಈ ವರ್ಷ ಸೆ.12ರವರೆಗೆ ತ.ನಾಡಿಗೆ 101.08 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ 416.65 ಟಿಎಂಸಿ ಹೆಚ್ಚುವರಿ ನೀರು ಹರಿದಿರುವ ಮಾಹಿತಿ ದಾಖಲಾಗಿದೆ. ಜೂನ್ನಲ್ಲಿ 16.46 ಟಿಎಂಸಿ, ಜುಲೈನಲ್ಲಿ 106.93, ಆಗಸ್ಟ್ನಲ್ಲಿ 223.57, ಸೆಪ್ಟೆಂಬರ್ನಲ್ಲಿ 69.69 ಟಿಎಂಸಿ ನೀರು ಹರಿದಿದೆ ಎಂದು ಹೇಳಿದರು.