ಬೆಂಗಳೂರು: ಕೃಷ್ಣಾಗೆ ಮೊದಲು ಬಾಗಿನ ಅರ್ಪಣೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಬಾರಿ ಕಾವೇರಿಗೆ ಬಾಗಿನ ಅರ್ಪಣೆ ಮಾಡುವ ಅವಕಾಶ ಸಿಗುವುದೇ? ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯ ಸಂಗತಿಯಾಗಿದೆ.
ಬಹುತೇಕ ಎಲ್ಲ ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಧಿಯಲ್ಲಿ ಮೊದಲು ಕಾವೇರಿಗೆ ಕೆಆರ್ಎಸ್ನಲ್ಲಿ, ಬಳಿಕ ಕೃಷ್ಣಾಗೆ ಆಲಮಟ್ಟಿ ಜಲಾಶಯದಲ್ಲಿ ಬಾಗಿನ ಅರ್ಪಣೆ ಮಾಡುವುದು ರೂಢಿಯಾಗಿತ್ತು. ಈ ಬಾರಿ ತತ್ಸಂಪ್ರದಾಯಕ್ಕೆ ತೆರೆ ಎಳೆದಿರುವ ಸಿಎಂ ಬೊಮ್ಮಾಯಿ, ಮೊದಲು ಕೃಷ್ಣಾಗೆ ಬಾಗಿನ ಅರ್ಪಣೆ ಮಾಡಿ ಬಂದಿದ್ದಾರೆ.
ಕಾವೇರಿಗೂ ಬಾಗಿನ ಅರ್ಪಣೆ ಮಾಡಲು ಮುಂದಾಗಿದ್ದರೂ ಕೆಆರ್ಎಸ್ ಜಲಾಶಯ ಇನ್ನೂ ತುಂಬದೆ ಇರುವುದು ಸಮಸ್ಯೆಯಾಗಿದೆ. ಕೆಆರ್ಎಸ್ ತುಂಬದೆ ಹೋದಲ್ಲಿ ಕಾವೇರಿಗೆ ಬಾಗಿನ ಅರ್ಪಣೆ ಮಾಡಲು ಅವಕಾಶ ಸಿಗದಿರುವ ಸಾಧ್ಯತೆಗಳು ಇವೆ. ಇನ್ನೂ ಮಳೆಗಾಲವಿರುವ ಕಾರಣ ಮಳೆ ಬಂದು ಜಲಾಶಯ ತುಂಬಬಹುದು ಎನ್ನುವ ನಿರೀಕ್ಷೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳದ್ದು. ಕೃಷ್ಣಾಗೆ ಬಾಗಿನ ಕೊಟ್ಟ ಮುಖ್ಯಮಂತ್ರಿಗೆ ಕಾವೇರಿಗೂ ಬಾಗಿನ ನೀಡುವ ಅವಕಾಶ ಸಿಗುವುದೇ ಎಂದು ಕಾದು ನೋಡಬೇಕಾಗಿದೆ.
ಮೈಸೂರಲ್ಲಿ ಗ್ಯಾಂಗ್ ರೇಪ್ ಸಂತ್ರಸ್ತೆ ಆಸ್ಪತ್ರೆಯಿಂದ ಡಿಸ್ಚಾರ್ಜ್: ನಾನು ದೂರು ಕೊಡಲ್ಲ, ನನ್ನನ್ನು ಬಿಟ್ಟುಬಿಡಿ…