ಮಂಗಳೂರು: ಪ್ರತೀ ವರ್ಷ ಸಂಭ್ರಮದಿಂದ ಆಚರಿಸಲಾಗುವ ಶ್ರೀಕೃಷ್ಣ ಜನ್ಮಾಷ್ಟಮಿ ಈ ಬಾರಿ ಮಂಗಳವಾರ ಸರಳವಾಗಿ ಆಚರಿಸಲಾಯಿತು.
ಇಸ್ಕಾನ್ ಸಂಸ್ಥೆಗಳು, ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ, ರಥಬೀದಿ ಶ್ರೀ ಗೋಪಾಲಕೃಷ್ಣ ಸನ್ನಿಧಿ, ಕದ್ರಿ ದೇವಳ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಕೊಟ್ಟಾರ ಶ್ರೀ ಕೃಷ್ಣ ಜ್ಞಾನೋದಯ ಭಜನಾ ಮಂದಿರ, ಅತ್ತಾವರ ಚಕ್ರಪಾಣಿ ಗೋಪಿನಾಥ ದೇವಳ, ಕುಂಪಲ ಬಾಲಕೃಷ್ಣ ಮಂದಿರ ಮೊದಲಾದೆಡೆ ಸರಳವಾಗಿ ಶ್ರೀ ಕೃಷ್ಣ ದೇವರಿಗೆ ಅಭಿಷೇಕ, ವಿಶೇಷ ಪೂಜೆಯೊಂದಿಗೆ ಶ್ರೀ ಕೃಷ್ಣಾಷ್ಟಮಿ ಆಚರಿಸಲಾಯಿತು.
ಸರ್ಕಾರದ ನಿಯಮಾವಳಿ ಪ್ರಕಾರ ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ಈ ಬಾರಿ ಅವಕಾಶವಿಲ್ಲದ ಕಾರಣ ಮನೆಯಗಳಲ್ಲೇ ಹಬ್ಬ ಆಚರಿಸಲಾಯಿತು. ದೇವಾಲಯಗಳಲ್ಲಿ ಶ್ರೀಕೃಷ್ಣ ದೇವರಿಗೆ ಅಭಿಷೇಕ, ವಿಶೇಷ ಪೂಜೆಗಳು ನಡೆದವು. ಮೊಸರು ಕುಡಿಕೆ ಇಲ್ಲದೆ ನಗರದ ರಸ್ತೆಗಳು ಕಳೆಗುಂದಿವೆ.
ಪ್ರತೀ ವರ್ಷ ಕದ್ರಿ, ಕೊಟ್ಟಾರ, ಅತ್ತಾವರ, ಕುಲಶೇಖರ, ತೊಕ್ಕೂಟ್ಟು ಮೊದಲಾದ ಕಡೆ ಮೊಸರು ಕುಡಿಕೆ ಉತ್ಸವ, ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು. ಈ ಬಾರಿ ಮೊಸರು ಕುಡಿಕೆ ಉತ್ಸವವಿಲ್ಲ, ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆಗಳೂ ಇರಲಿಲ್ಲ. ಕೆಲವರು ಮನೆಯಲ್ಲೇ ವೇಷ ಹಾಕಿ ಫೋಟೋ ತೆಗೆದು ಸಂಭ್ರಮಿಸಿದರು. ಮಾರುಕಟ್ಟೆಯಲ್ಲಿ ಮೂಡೆ, ಹೂವು ಖರೀದಿ ಕೂಡ ಡಲ್ ಆಗಿತ್ತು.