ನಮ್ಮದು ಕೃಷಿ ಪ್ರಧಾನ ದೇಶ ಎಂಬುದನ್ನು ಹಚ್ಚ ಹಸುರಿನ ಭಾರತದ ನಕ್ಷೆಯೊಳಗೆ ಚಿತ್ರಿಸಿದ್ದ ರಂಗೋಲಿ ಕೃಷಿಮೇಳದ ಸಂದೇಶವನ್ನು ಅರ್ಥಪೂರ್ಣವಾಗಿ ಸಾರಿತು. ಸ್ಪರ್ಧೆಯಲ್ಲಿ ಹೊಲದಲ್ಲಿ ಉಳುಮೆ ಮಾಡುವ ರೈತ, ಎತ್ತುಗಳು, ಪ್ರಕೃತಿ ಮಾತೆ, ರಾಷ್ಟ್ರಧ್ವಜ, ಶಿವಲಿಂಗ, ಸಂಕ್ರಾಂತಿ ಸಂಭ್ರಮ, ಧಾನ್ಯಗಳಲ್ಲಿ ರಂಗೋಲಿ ಸೇರಿ ವೈವಿಧ್ಯಮಯ ಬಣ್ಣಗಳ ರಂಗೋಲಿ ಚಿತ್ತಾರಗಳು ನೋಡುಗರನ್ನು ಆಕರ್ಷಿಸಿದವು.
ತುಮಕೂರು, ದಾವಣಗೆರೆ, ಬಾಗಲಕೋಟೆ, ಕುಶಾಲನಗರ, ಮೈಸೂರು ಸೇರಿ ವಿವಿಧೆಡೆ ಯಿಂದ ಆಗಮಿಸಿದ್ದ ಮಹಿಳಾ ಸ್ಪರ್ಧಿಗಳ ಜತೆ ಒಬ್ಬ ಪಿಎಚ್ಡಿ ಮಾಡುತ್ತಿರುವ ಯುವಕ ಭಾಗವಹಿಸಿದ್ದು ವಿಶೇಷ. ರಂಗೋಲಿ ಬಿಡಿಸಲು 1.30 ಗಂಟೆ ಕಾಲ ನಿಗದಿ ಮಾಡಲಾಗಿತ್ತು. ತೀರ್ಪಗಾರರಾಗಿ ವಿದ್ಯಾಅರಸ್, ಅನ್ನಪೂರ್ಣ, ಶೋಭಾ ಶ್ರೀನಿವಾಸ್ ಭಾಗವಹಿಸಿದ್ದರು.
ಯುವಕನಿಂದ ಚಿತ್ತಾರ: ಬಾಗಲಕೋಟೆ ಮೂಲದ ಯುವಕ ರಾಘವೇಂದ್ರ ಮೈಸೂರು ವಿವಿಯಲ್ಲಿ ಮಹಿಳಾ ಅಧ್ಯಯನ ವಿಷಯದಲ್ಲಿ ಪಿಎಚ್ಡಿ ಮಾಡುತ್ತಿದ್ದು, ಹತ್ತು ವರ್ಷಗಳಿಂದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯಾಸ ರೂಢಿಸಿ ಕೊಂಡಿದ್ದಾರೆ.
ಕೃಷಿಮೇಳದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಕೃತಿ ಪ್ರತಿಬಿಂಬಿಸುವ ವರ್ಣರಂಜಿತ ಚಿತ್ತಾರ ಬಿಡಿಸಿ ಗಮನ ಸೆಳೆದರು. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲಾಯಿತು. ಎಲ್ಲ ಸ್ಪರ್ಧಿಗಳಿಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.
ರಂಗೋಲಿ ವಿಜೇತರು
1. ಸಾವಿತ್ರಿ ಸುಧಾಕರ್- ಮೈಸೂರು
2. ಗೌರಿ- ಮೈಸೂರು 3. ಗೀತಾ- ಮೈಸೂರು
ರಂಗೋಲಿ ಎಂದರೆ ರಂಗ’ ‘ಒಲಿ’ ಎಂಬ ಆರ್ಥವನ್ನೂ ಸೂಚಿಸá-ತ್ತದೆ. ದೇವರನ್ನು ಒಲಿಸಿಕೊಳ್ಳಲು ರಂಗೋಲಿ ಬಿಡಿಸಲಾಗುತ್ತದೆ ಎಂಬ ಮಾತಿದೆ. ಪ್ರತಿನಿತ್ಯ ರಂಗೋಲಿ ಹಾಕುವುದು ಮಹಿಳೆಯರ ಆರೋಗ್ಯಕ್ಕೆ ಉತ್ತಮ ಅಭ್ಯಾಸ.
|ಅನ್ನಪೂರ್ಣ ತೀರ್ಪಗಾರರು
ಹೆಣ್ಣು ಪ್ರಕೃತಿಯ ಒಂದು ಭಾಗವಾಗಿದ್ದು, ಅದನ್ನು ನನ್ನ ರಂಗೋಲಿಯಲ್ಲಿ ಚಿತ್ರಿಸಿದ್ದೇನೆ. ಕಾರ್ಯಕ್ರಮ ತುಂಬ ಚೆನ್ನಾಗಿದ್ದು, ಅವಕಾಶ ಕಲ್ಪಿಸಿಕೊಟ್ಟಿರುವುದಕ್ಕೆ ಧನ್ಯವಾದಗಳು.
| ಜ್ಯೋತಿ ತುಮಕೂರು
ಮುಂದಿನ ದಿನಗಳಲ್ಲಿ ರಂಗೋಲಿ ಬಿಡಿಸಲು ರಾಸಾಯನಿಕಯುಕ್ತ ಬಣ್ಣಗಳನ್ನು ಬಳಸುವುದನ್ನು ನಿಲ್ಲಿಸಿ, ಜೇಡಿಮಣ್ಣು, ರಂಗೋಲಿ ಪುಡಿ ಬಳಸುವಂತೆ ಜಾಗೃತಿ ಮೂಡಿಸಬೇಕು.
| ವಿದ್ಯಾ ಅರಸ್ ತೀರ್ಪಗಾರರು