ನಾಡಹಬ್ಬ ದಸರಾ ಸಂಭ್ರಮ ಎಲ್ಲೆಡೆ ಶುರುವಾಗಿದೆ. ಕರೊನಾ ನಡುವೆಯೂ ಇಡೀ ಕರುನಾಡು ಹಬ್ಬದ ಖುಷಿಯಲ್ಲಿದೆ. ನಾನು ಮೂಲತಃ ಕೊಡಗಿನವಳಾದ್ದರಿಂದ ನಮ್ಮ ಕಡೆ ವಿಜಯದಶಮಿ ಆಚರಣೆ ಇರುವುದಿಲ್ಲ. ಒಂಭತ್ತು ದಿನಗಳ ಪೂಜೆ, ಗೊಂಬೆ ಕೂರಿಸುವ ಸಂಪ್ರದಾಯ ಇರುವುದಿಲ್ಲ. ಆಯುಧ ಪೂಜೆಯ ವೈಭವವನ್ನೇ ನಾವು ವಿಜೃಂಭಣೆಯಿಂದ ಆಚರಿಸುತ್ತೇವೆ. ನಮ್ಮ ಕಡೆಗೆಲ್ಲ ಮೈಸೂರು ದಸರಾ ರೀತಿಯಲ್ಲಿಯೇ ಮಡಿಕೇರಿ ದಸರಾದ ವೈಭವ ಜೋರು. ಇಡೀ ಊರಿಗೆ ಊರೇ ಸಂಭ್ರಮದಲ್ಲಿರುತ್ತದೆ. ಅಂಗಡಿ ಮುಂಗಟ್ಟುಗಳನ್ನೆಲ್ಲ ಬಂದ್ ಮಾಡಿ ಮೆರವಣಿಗೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಆರ್ಕೆಸ್ಟ್ರಾಗಳ ಸದ್ದು ಇರುತ್ತದೆ. ಆದರೆ, ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಎಲ್ಲವೂ ಸರಳವಾಗಿಯೇ ನೆರವೇರಲಿದೆ. ನಾನು ಬೆಂಗಳೂರಿನಲ್ಲಿ ಇರುವುದರಿಂದ ಹಬ್ಬದ ದಿನ ಇಲ್ಲಿನ ಕೆಲ ಸ್ನೇಹಿತರ ಮನೆಗೆ ಭೇಟಿ ಮಾಡಿ ಬರುತ್ತೇನೆ. ನನ್ನ ಹುಟ್ಟುಹಬ್ಬ ಇದೇ ಸಮಯದಲ್ಲಿ ಬರುವುದರಿಂದ ಚಿಕ್ಕಂದಿನಲ್ಲಿ ನಮ್ಮ ಜನ್ಮದಿನದ ಪ್ರಯುಕ್ತ ಇಷ್ಟೊಂದು ಸಂಭ್ರಮ ಏಕೆ ಎಂದು ಅಪ್ಪ ಅಮ್ಮನಿಗೆ ಕೇಳಿದ್ದೆ. ತಿಳಿವಳಿಕೆ ಬಂದ ಮೇಲೆ ನಿಜ ಗೊತ್ತಾಗಿ ಸುಮ್ಮನಾಗಿದ್ದೆ. ಕರೊನಾ ಹಿನ್ನೆಲೆಯಲ್ಲಿ ದಸರಾ ಹಬ್ಬದ ಸಂಭ್ರಮ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಕಳೆದ ವರ್ಷ ಇಷ್ಟೊತ್ತಿಗೆ ಮೈಸೂರಿನ ಯುವ ದಸರಾದಲ್ಲಿ ಭಾಗವಹಿಸಿದ್ದೆ. ಈ ವರ್ಷ ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ.
| ಕೃಷಿ ತಾಪಂಡ, ನಟಿ