ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ 41ನೇ ಅಧ್ಯಕ್ಷರಾಗಿ ಇಂದು(ಗುರುವಾರ) ಪ್ರದಗ್ರಹಣ ಮಾಡಿದ ಡಿ.ಕೆ. ಶಿವಕುಮಾರ್, ‘ನನ್ನನ್ನು ಕನಕಪುರ ಬಂಡೆ ಅಂತ ಕರೀತಾರೆ. ಈ ಬಂಡೆ ಮೂರ್ತಿ ಆಗಲ್ಲ, ವಿಧಾನಸೌಧದ ಮೆಟ್ಟಿಲು ಹತ್ತುವ ಕಲ್ಲಾಗಲಿದೆ’ ಎನ್ನುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದರು.
ಪ್ರತಿಜ್ಞಾವಿಧಿ ಸ್ವೀಕಾರದ ಬಳಿಕ ಸರ್ವಧರ್ಮ ಗುರುಗಳಿಗೆ ನಮಿಸುತ್ತ ಮಾತು ಆರಂಭಿಸಿದ ಡಿಕೆಶಿ, ನನಗೆ ಯಾವ ಜಾತಿ-ಧರ್ಮದ ಮೇಲೂ ನಂಬಿಕೆ ಇಲ್ಲ. ನನ್ನ ಪಾಲಿಗೆ ಇರೋದು ಕಾಂಗ್ರೆಸ್ ಧರ್ಮ, ಕಾಂಗ್ರೆಸ್ ಜಾತಿ, ಕಾಂಗ್ರೆಸ್ ಗುಂಪು. ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿಟ್ಟವನು. ಐದು ಬೆರಳು ಸೇರಿದರೆ ಹಸ್ತ. ಹೊಸ ಅಧ್ಯಾಯವನ್ನ ಆರಂಭಿಸುತ್ತೇನೆ. ನನ್ನ ಮೇಲೆ ಇನ್ನೂ ಬೇರೆ ಬೇರೆ ಕಾಟ ಇರಬಹುದು. ಆದರೆ ಈ ಡಿಕೆ ಯಾವುದಕ್ಕೂ ಹೆದರೋದಿಲ್ಲ. ಕನಕಪುರ ಬಂಡೆಯನ್ನು ಸುಮ್ಮನೆ ಎಂದು ತಿಳಿದುಕೊಳ್ಳಬೇಡಿ ಎಂದು ಎದುರಾಳಿಗಳಿಗೆ ಎಚ್ಚರಿಸಿದರು. ಇದನ್ನೂ ಓದಿರಿ ಸಗಣಿ-ಗಂಜಲ ಬಳಸಿದ್ರೆ ಕೋವಿಡ್ ಬರಲ್ಲ!
‘ಅವಕಾಶಗಳನ್ನ ನಾವೇ ಸೃಷ್ಟಿಮಾಡಿಕೊಳ್ಳಬೇಕು. ಆ ಮೂಲಕ ನಾವೇ ಗುರಿ ಸಾಧಿಸಬೇಕು’ ಇದು ಅರಸು ಮತ್ತು ಇಂದಿರಾ ಗಾಂಧಿ ಹೇಳಿಕೊಟ್ಟ ಪಾಠ. ಅದನ್ನ ತಪ್ಪದೇ ಪಾಲಿಸುತ್ತೇನೆ. ನನಗೆ ಅಧ್ಯಕ್ಷ ಸ್ಥಾನದ ಹಂಬಲ ಇಲ್ಲ, ಸವಾಲನ್ನು ಎದುರಿಸೋ ಹಂಬಲ ಇದೆ. ನನ್ನ ಮುಂದೆ ದೊಡ್ಡ ಜವಾಬ್ದಾರಿ ಇದೆ. ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಆವರಿಸಿದೆ. ಈ ಪಕ್ಷದಲ್ಲೇ ಇರ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿಯೇ ಮುನ್ನಡೆಯುತ್ತೇನೆ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುತ್ತೇನೆ ಎಂದು ಡಿಕೆಶಿ ವಾಗ್ದಾನ ನೀಡಿದರು.
ಬಿಜೆಪಿಯವರು ನನ್ನನ್ನು ಷಡ್ಯಂತ್ರ ಮಾಡಿ ತಿಹಾರ್ ಜೈಲಿಗೆ ಕಳಿಸಿದ್ದರು. ಸೋನಿಯಾ ಗಾಂಧಿ ಜೈಲಿಗೆ ಬಂದು ಒಂದು ಗಂಟೆ ಧೈರ್ಯ ತುಂಬಿದ್ದರು. ‘ನೀವು ಕರ್ನಾಟಕದ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದು ಸೋನಿಯಾ ಅವರು ಅಂದೇ ಹೇಳಿದ್ದರು. ಅವರು ನನ್ನನ್ನು ಸಹೋದರನಂತೆ ಕಾಣುತ್ತಾರೆ. ದೇವೇಗೌಡರ ವಿರುದ್ಧ ನನ್ನನ್ನು ನಿಲ್ಲಿಸುವಷ್ಟು ನಂಬಿಕೆ ಇಟ್ಟಿದ್ದರು ಸೋನಿಯಾ ಗಾಂಧಿ ಎನ್ನುತ್ತ ಡಿಕೆಶಿ ಭಾವುಕರಾದರು. ಖರ್ಗೆ, ಪರಮೇಶ್ವರ್ ಎಲ್ಲರೂ ಬಂದು ಧೈರ್ಯ ತುಂಬಿದ್ದರು. ಇನ್ನೇನು ಡಿಕೆಯ ರಾಜಕೀಯ ಮುಗಿದೇ ಹೋಯ್ತು ಅಂದುಕೊಂಡಿದ್ದರು. ಆದರೆ, ಇವರೆಲ್ಲರ ಧೈರ್ಯ ನನಗೆ ಇಲ್ಲಿಗೆ ತಂದು ನಿಲ್ಲಿಸಿದೆ ಎಂದು ಸ್ಮರಿಸಿದರು.
ಇದನ್ನೂ ಓದಿರಿ ಡಿಕೆಶಿ ಪಟ್ಟಾಭಿಷೇಕ ಆರಂಭದ ಕ್ಷಣ ಹೇಗಿತ್ತು?
ಕಾಂಗ್ರೆಸ್ ಯುವರಾಜನಿಂದ ವಿಶ್: ಪದಗ್ರಹಣ ಸಮಾರಂಭ ನಡೆಯುತ್ತಿರುವಾಗಲೇ ಡಿಕೆಶಿಗೆ ಪತ್ಯೇಕವಾಗಿ ದೂರವಾಣಿ ಕರೆ ಮಾಡಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಶುಭ ಕೋರಿದರು. ಕರೆ ಸ್ವೀಕರಿಸಿದ ಡಿಕೆಶಿ, ಲೌಡ್ಸ್ಪೀಕರ್ ಆನ್ ಮಾಡಿ ಮೈಕ್ ಬಳಿ ಹಿಡಿದುಕೊಂಡೇ ಮಾತನಾಡಿದರು.
ರಾಹುಲ್ ಗಾಂಧಿ ಮಾತನಾಡಿ, ‘ಕರೊನಾ ಲಾಕ್ಡೌನ್ನಿಂದಾಗಿ ದೇಶದಲ್ಲಿ ಸಂಕಷ್ಟ ಎದುರಾಗಿದೆ. ಆರ್ಥಿಕವಾಗಿ ದೇಶ ತೊಂದರೆಯಲ್ಲಿದೆ. ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು, ಕೆಲಸ ಮಾಡಬೇಕು’ ಎನ್ನುವ ಮೂಲಕ ಡಿಕೆಶಿಗೆ ವಿಶ್ ಮಾಡಿದರು.
‘ನಾವು ನಿಮ್ಮೊಂದಿಗೆ ಇದ್ದೇವೆ. ಯಶಸ್ವಿಯಾಗಿ ಪಕ್ಷವನ್ನು ಮುನ್ನಡೆಸಿ. ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ. ಹೀಗಾಗಿ ಹೋರಾಟವನ್ನು ಮತ್ತಷ್ಟು ಬಲಗೊಳಿಸಬೇಕಿದೆ’ ಎಂದು ಪ್ರಿಯಾಂಕ ಗಾಂಧಿ ಹಾರೈಸಿದರು.
ಡಿಕೆಶಿ ಪದಗ್ರಹಣಕ್ಕೆ ಕಾಂಗ್ರೆಸ್ ರಾಜ್ಯ ವಕ್ತಾರ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿ ತಾಯಿ ಗೌರಮ್ಮ ಮತ್ತು ಪತ್ನಿ ಉಷಾ ಹಾಗೂ ಹಲವು ಮುಖಂಡರು ಸಾಕ್ಷಿಯಾದರು.