ಕೊಪ್ಪಳ: ನೇತಾಜಿ ಸುಭಾಷ ಚಂದ್ರ ಬೋಸ್ ದೇಶದ ಸ್ವಾತಂತ್ರೃ ನಂತರ ಆಗಬೇಕಾದ ಅಭಿವೃದ್ಧಿ ಬಗ್ಗೆ ಹಲವು ಕನಸು ಕಂಡಿದ್ದರು. ಯುವಕರೆಲ್ಲ ಅವರ ಕನಸು ನನಸು ಮಾಡಬೇಕಿದೆ ಎಂದು ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಹೇಳಿದರು.
ಗಿಣಿಗೇರಾ ಗ್ರಾಮದಲ್ಲಿ ನೇತಾಜಿ ಸುಭಾಷಚಂದ್ರ ಬೋಸ್ ಜನ್ಮದಿನ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯಲ್ಲಿ ಮಾತನಾಡಿದರು. ನೇತಾಜಿ ಚಿಕ್ಕವರಿದ್ದಾಗ ಕೇವಲ ಬ್ರಿಟಿಷರನ್ನು ಈ ದೇಶ ಬಿಟ್ಟು ಓಡಿಸಬೇಕೆಂದು ಅಂದುಕೊಂಡಿದ್ದರು. ಯಾವುದೇ ಅಸಮಾನತೆ, ಜಾತಿ, ಧರ್ಮ ಭೇದ-ಭಾವ ಇಲ್ಲದ ಸುಂದರ ಸಮಾಜ ಕಟ್ಟುವ ಕನಸು ಹೊಂದಿದ್ದರು. ದೇಶಕ್ಕಾಗಿ ತಮ್ಮ ಸರ್ವಸ್ವ ತ್ಯಾಗ ಮಾಡಿ ಹೋರಾಟ ಮಾಡಿದರು. ಐತಿಹಾಸಿಕ ದುರಂತಗಳಿಂದಾಗಿ ಅವರ ಕನಸು ಇನ್ನೂ ಕನಸಾಗಿಯೇ ಉಳಿದಿದ್ದು, ನನಸು ಮಾಡುವ ಜವಾಬ್ದಾರಿ, ಯುವಜನರ ಮೇಲಿದೆ ಎಂದರು.
ಗಿಣಿಗೇರಾ ನಾಗರಿಕ ಹೋರಾಟ ಸಮಿತಿ ಮುಖಂಡ ಆನಂದ, ಮಂಗಳೇಶ ರಾಠೋಡ್ ಮಾತನಾಡಿದರು. ಗ್ರಾಮದ ಸೇವಾಲಾಲ್ ವೃತ್ತದಿಂದ ಆರಂಭವಾದ ರ್ಯಾಲಿ ಅಂಬೇಡ್ಕರ್ ವೃತ್ತ, ಭಗೀರಥ ವೃತ್ತ, ಗಂಗಾವತಿ ವೃತ್ತ ಮೂಲಕ ಗ್ರಾಮದಾದ್ಯಂತ ಸಂಚರಿಸಿತು. ಎಐಡಿವೈಒ ಅಧ್ಯಕ್ಷ ರಮೇಶ ವಂಕಲಕುಂಟಿ, ಗಿಣಿಗೇರಾ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಶರಣು ಗಡ್ಡಿ, ಮುಖಂಡರಾದ ಅಂಬಣ್ಣ ಮುರಮನಿ, ವಿಜಯ್, ಕಿರಣ್, ಮಂಜು, ಕುಮಾರ, ನಿಂಗರಾಜ, ವಿನಾಯಕ, ಕೃಷ್ಣ ಮೂರ್ತಿ ಇತರರಿದ್ದರು.