ಕೊಪ್ಪಳ: ನರೇಗಾ ಕಾಮಗಾರಿ ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಕುಷ್ಟಗಿ ತಾಲೂಕಿನ ಗುತ್ತಿಗೆದಾರರು ವಿಷದ ಬಾಟಲಿ ಹಿಡಿದು ಜಿಪಂ ಸಿಇಒ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ತುಗ್ಗಲಡೋಣಿ ಗ್ರಾಪಂ ಸೇರಿ ವಿವಿಧ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ 2018-19ರಲ್ಲಿ ಬಹು ಕಮಾನಿನ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಕಾಮಗಾರಿ ಆರಂಭಕ್ಕೂ ಮುನ್ನ ಗ್ರಾಪಂನಿಂದ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ. ತಾಪಂ ತಾಂತ್ರಿಕ ಅನುಮೋದನೆ ಪಡೆದು 6 ರೈತರ ಹೊಲಕ್ಕೆ ಹೊಂದಿಕೊಂಡು ಚೆಕ್ ಡ್ಯಾಂ ನಿರ್ಮಿಸಲಾಗಿದೆ. ಕಾಮಗಾರಿ ಗುಣಮಟ್ಟದ ಬಗ್ಗೆ ಪರಿಶೀಲನಾ ತಂಡವು ವರದಿ ನೀಡಿದೆ. ಮಳೆಯಾದಾಗ ನೀರು ಸಂಗ್ರಹವಾಗಿ ರೈತರಿಗೆ ಅನುಕೂಲವಾಗಿದೆ. ಆದರೆ, ಸಮಿತಿ ಸರಿಯಾಗಿ ಪರಿಶೀಲಿಸದೆ, ಕಡಿಮೆ ಮೊತ್ತ ಪಾವತಿಸುವಂತೆ ವರದಿ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಹಾಗೂ ಉಪ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ ಅಧಿಕಾರಿಗಳು ಬಿಲ್ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಇಷ್ಟು ದಿನಗಳಾದರೂ ಬಿಲ್ ನೀಡುತ್ತಿಲ್ಲ. ನ್ಯಾಯುತವಾಗಿ ಕಾಮಗಾರಿ ನಡೆಸಿದ್ದರೂ ವಿನಾಕಾರಣ ಬಿಲ್ ಮೊತ್ತ ಕಡಿತ ಮಾಡಿರುವುದರಿಂದ ಸಮಸ್ಯೆಯಾಗುತ್ತಿದೆ. ಜೀವನವೇ ಸಾಕಾಗಿದೆ ಎಂದು ವಿಷ ತೆಗೆದುಕೊಳ್ಳಲು ಮುಂದಾದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನಕಾರರನ್ನು ಸಮಾಧಾನಿಸಿದರು. ಬಳಿಕ ಸಿಇಒ ಫೌಜಿಯಾ ತರನ್ನುಮ್, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನಕಾರರಾದ ಶಿವಕುಮಾರ್ ಬನ್ನಿಗಿಡದ, ಸೋಮಪ್ಪ, ಹನುಮಂತ ಹಿರೇಮನಿ, ಶರಣು ತಗ್ಗಿಹಾಳ ಇತರರಿದ್ದರು.