ಅಳವಂಡಿ: ಶ್ರಾವಣ ಮಾಸ ನಿಮಿತ್ತ ಬೆಟಗೇರಿ ಗ್ರಾಮದಲ್ಲಿ ದುರ್ಗಾದೇವಿಯ ಹೊಳೆದಂಡೆ ಯಾತ್ರೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆಯಿಂದಲೇ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಿದರು. ನಂತರ ಗ್ರಾಮಸ್ಥರು ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಅಡ್ಡಪಲ್ಲಕ್ಕಿಯಲ್ಲಿ ಹೊಳೆದಂಡೆಗೆ ಒಯ್ಯದರು. ಗ್ರಾಮಸ್ಥರು ಎತ್ತುಗಳನ್ನು ಸಿಂಗರಿಸಿ ಬಂಡಿ ಕಟ್ಟಿಕೊಂಡು ಕುಟುಂಬ ಸಮೇತ ಹಾಗೂ ಬಂಧುಬಳಗದೊಂದಿಗೆ ಮನೆಯಲ್ಲಿ ತಯಾರಿಸಿದ ಹೋಳಿಗೆ, ಕರಿಕಡುಬು ಸೇರಿ ವಿವಿಧ ಖಾದ್ಯಗಳೊಂದಿಗೆ ತುಂಗಭದ್ರಾ ನದಿ ದಂಡೆಗೆ ತೆರಳಿ ಗಂಗಾಮಾತೆ ಹಾಗೂ ದುರ್ಗಾದೇವಿಗೆ ಪೂಜೆ ಸಲ್ಲಿಸಿದರು. ನಂತರ ಮನೆಯಿಂದ ತಂದಿದ್ದ ಬುತ್ತಿ ಊಟ ಸವಿದರು. ನೀರಲಗಿ, ಮತ್ತೂರ, ತಿಗರಿ, ಹನಕುಂಟಿ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಭಾಗಿಯಾಗಿದ್ದರು. ಪ್ರಮುಖರಾದ ವೀರೇಶ ಸಜ್ಜನ, ವಿದ್ಯಾ ಶ್ರೀಕಾಂತ ಭಾವಿ, ಶರಣಪ್ಪ ಮತ್ತೂರು, ಸಿದ್ದಣ್ಣ ಸಜ್ಜನ, ನಾಗರಾಜ ಪಾತ್ರದ, ಹನುಮಣ್ಣ ಬೆಲ್ಲಡಗಿ, ಭೀಮಣ್ಣ ಕವಲೂರು, ಮಂಜುನಾಥ ಬಿಸರಳ್ಳಿ, ಬಸವರಾಜ ಯತ್ನಳ್ಳಿ, ಶ್ರೀನಿವಾಸ ಪಾತ್ರದ, ಮಲ್ಲಿಕಾರ್ಜುನ ಯತ್ನಳ್ಳಿ, ಮಂಜುನಾಥ ಮಾಳೆಕೊಪ್ಪ, ಪ್ರವೀಣ ಗುಳದಳ್ಳಿ, ಏಳುಕೋಟೇಶ ಇತರರಿದ್ದರು.