ಕೊಪ್ಪಳ: ಕಾಲೇಜು ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆ ಮಾಡುವ ಮನೋಭಾವ ಮೂಡಿಸಲು ಶ್ರಮಿಸಬೇಕು ಎಂದು ಭಾರತೀಯ ರೆಡ್ಕ್ರಾಸ್ ರಾಜ್ಯ ಶಾಖೆಯ ಯುವ ರೆಡ್ಕ್ರಾಸ್ ಸಂಯೋಜಕ ದಿಲೀಪ್ಕುಮಾರ್ ಸಿ.ಎಸ್.ಹೇಳಿದರು.
ನಗರದ ಕೃಷಿ ವಿಸ್ತರಣಾ ಕೇಂದ್ರದ ಸಭಾಂಗಣದಲ್ಲಿ ಶನಿವಾರ ಭಾರತೀಯ ರೆಡ್ಕ್ರಾಸ್ ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ಯುವ ರೆಡ್ ಕ್ರಾಸ್ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಾಲೇಜು ವಿದ್ಯಾರ್ಥಿಗಳು ನಿಜಕ್ಕೂ ಸೇವೆ ಮಾಡುವ ಉತ್ಸುಕದಲ್ಲಿರುತ್ತಾರೆ. ಆದರೆ, ಅವರಿಗೆ ಯಾವ ದಾರಿಯ ಮೂಲಕ ಸೇವೆ ಮಾಡಬೇಕು ಎನ್ನುವ ಅರಿವು ಇರುವುದಿಲ್ಲ. ಅಂಥ ಯುವಶಕ್ತಿಯನ್ನು ಇಂಥ ಅಂತಾರಾಷ್ಟ್ರೀಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸರ್ಕಾರಿ ಪದವಿ ಕಾಲೇಜಿನಲ್ಲಿರುವ ಯುವ ರೆಡ್ ಕ್ರಾಸ್ ಸಂಯೋಜಕರು ಮಾರ್ಗದರ್ಶನ ಮಾಡಬೇಕು ಎಂದರು.
ನಿರ್ದೇಶಕ ಚಂದ್ರಶೇಖರ ಕರಮುಡಿ ಮಾತನಾಡಿ, ರೆಡ್ಕ್ರಾಸ್ ಸಂಸ್ಥೆ ವಿಶ್ವವ್ಯಾಪಿ ಸೇವೆ ಮಾಡುತ್ತಿದೆ. ಅದರಲ್ಲಿ ಗುರುತಿಸಿಕೊಳ್ಳುವುದೆ ದೊಡ್ಡ ಹೆಮ್ಮೆ ಎಂದರು. ನಿರ್ದೇಶಕ ರಾಜೇಶ ಯಾವಗಲ್ ಮಾತನಾಡಿದರು. ಸಂಸ್ಥೆಯ ಜಿಲ್ಲಾ ಶಾಖೆ ಚೇರಮನ್ ಸೋಮರಡ್ಡಿ ಅಳವಂಡಿ, ಡಾ.ಗವಿಸಿದ್ದನಗೌಡ ಪಾಟೀಲ್, ಡಾ.ಶಿವನಗೌಡ ಪಾಟೀಲ್, ಡಾ.ಶ್ರೀನಿವಾಸ ಹ್ಯಾಟಿ, ಸುಧೀರ ಅವರಾಧಿ ಇತರರಿದ್ದರು.