ಕೊಪ್ಪಳ: ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಕಾನೂನು ಜಾರಿ ಹಾಗೂ ಕೇಂದ್ರ ಸಚಿವ ಅಜಯ್ ಮಿಶ್ರಾ ವಜಾಕ್ಕೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಜಿಲ್ಲಾ ಪದಾಧಿಕಾರಿಗಳು ಭಾನುವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ರೈತರಿಗೆ ಮಾರಕವಾದ ಕೃಷಿ ಕಾಯ್ದೆ ರದ್ದು ಪಡಿಸುವುದಾಗಿ ಹಾಗೂ ಇತರ ಬೇಡಿಕೆ ಈಡೇರಿಸುವುದಾಗಿ ಲಿಖಿತ ಹೇಳಿಕೆ ನೀಡಿದೆ. ಆದರೆ, ಕನಿಷ್ಠ ಬೆಂಬಲ ಬೆಲೆ ಕಾನೂನು ರಚನೆಗೆ ಇದರ ವಿರೋಧಿಗಳನ್ನೇ ಅಧಿಕ ಸಂಖ್ಯೆಯಲ್ಲಿ ನೇಮಿಸಿದೆ. ರೈತ ಪ್ರತಿನಿಧಿಗಳಿಗೆ ಸಮಿತಿಯಲ್ಲಿ ಆದ್ಯತೆ ನೀಡಿಲ್ಲ. ಲಿಖಿಂಪುರದಲ್ಲಿ ರೈತರ ಹತ್ಯೆಗೆ ಕಾರಣವಾದ ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು ಸಂಪುಟದಲ್ಲಿ ಮುಂದುವರಿಸಲಾಗಿದೆ. ಉತ್ತರ ಪ್ರದೇಶ ಹಾಗೂ ಕೇಂದ್ರ ಸರ್ಕಾರ ಆರೋಪಿಗಳನ್ನು ರಕ್ಷಿಸುತ್ತಿದೆ. ಮತ್ತೊಂದೆಡೆ ಆರ್ಎಸ್ಎಸ್ನ ನಿಜಬಣ್ಣ ಬಯಲು ಮಾಡಿದ ಸಾಹಿತಿ ದೇವನೂರು ಮಹಾದೇವ ಅವರ ವಿರುದ್ಧವೂ ಬಲಪಂಥೀಯರು ಕೀಳು ಭಾಷೆ ಬಳಸಿ ಟೀಕಿಸುತ್ತಿದ್ದಾರೆಂದು ಆರೋಪಿಸಿದರು.
ರಾಜ್ಯ ಸರ್ಕಾರ ಮೂರು ಕೃಷಿ ಸಂಬಂಧಿ ತಿದ್ದುಪಡಿ ವಾಪಸ್ ಪಡೆಯಬೇಕು. ದೇವನೂರು ಮಹಾದೇವ ಸೇರಿ ಇತರ 60ಕ್ಕೂ ಅಧಿಕ ಸಾಹಿತಿಗಳಿಗೆ ಕೊಲೆ ಬೆದರಿಕೆ ಬಂದಿದ್ದು, ರಕ್ಷಣೆ ನೀಡಬೇಕು. ಕೀಳುಮಟ್ಟದ ಭಾಷೆ ಬಳಸಿ ಟೀಕಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಬೆಂಬಲ ಬೆಲೆ ನಿಗದಿ ಕಾನೂನು ರಚನಾ ಸಮಿತಿಯಲ್ಲಿ ರೈತರ ಮುಖಂಡರನ್ನು ಸೇರಿಸಬೇಕು. ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು. ಮುಖಂಡರಾದ ಡಿ.ಎಚ್.ಪೂಜಾರ, ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ್, ಮಾರ್ಕೆಂಡೆಪ್ಪ ಏಣಿಗಿ, ಸಣ್ಣ ಹನುಮಂತ ಹುಲಿಹೈದರ, ಎ.ಬಿ.ದಿಂಡೂರ, ಎ.ಜಿ.ಮಣ್ಣೂರ, ಗಾಳೆಪ್ಪ ಮುಂಗೋಲಿ ಇತರರಿದ್ದರು.