ಕೊಪ್ಪಳ: ಹೂಗಾರರು ಕಾಯಕ ಜೀವಿಗಳು. ಸಮುದಾಯದ ಸಾಮಾಜಿಕ, ಆರ್ಥಿಕ ಪ್ರಗತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತ್ಯೇಕ ನಿಗಮ ಸ್ಥಾಪನೆಗೆ ಒತ್ತಾಯಿಸಿ ಸಿಎಂ ಬಳಿ ನಿಯೋಗ ಕೊಂಡೊಯ್ಯಲಾಗುವುದೆಂದು ಸಂಸದ ಸಂಗಣ್ಣ ಕರಡಿ ಭರವಸೆ ನೀಡಿದರು.
ಜಿಲ್ಲಾ ಹೂಗಾರ ಸಮುದಾಯದಿಂದ ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶರಣ ಹೂಗಾರ ಮಾದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣ ಹೂಗಾರ ಮಾದಯ್ಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತಿರುವುದು ಸಂತಸದ ವಿಷಯ. ಸಮುದಾಯ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸಮುದಾಯ ಅಭಿವೃದ್ಧಿಗೆ ಪ್ರತ್ಯೇಕ ನಿಗಮ/ಮಂಡಳಿ ಸ್ಥಾಪಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ ಒತ್ತಾಯಿಸಲಾಗುವುದು. ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಕೊಡಿಸಲಾಗುವುದು ಎಂದರು.
ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್ ಮಾತನಾಡಿ, ಹೂಗಾರ ಸಮುದಾಯದ ಬಗ್ಗೆ ಸಮಾಜದಲ್ಲಿ ವಿಶೇಷ ಗೌರವವಿದೆ. ನಿತ್ಯ ಕಾಯಕ ಯೋಗಿಗಳು ಎಂದರು. ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿದರು. ಸಾಹಿತಿ ರಂಜಾನ ದರ್ಗಾ ವಿಶೇಷ ಉಪನ್ಯಾಸ ನೀಡಿದರು. ಸಮುದಾಯ ಭವನ ನಿರ್ಮಾಣಕ್ಕೆ ಒಂದು ಎಕರೆ ಭೂಮಿ ದಾನ ಮಾಡಿದ ಅನ್ನಪೂರ್ಣ ಭೀಮಪ್ಪ ಹೂಗಾರರನ್ನು ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ್, ಜೆಡಿಎಸ್ ನಿಯೋಜಿತ ಅಭ್ಯರ್ಥಿ ವೀರೇಶ ಮಹಾಂತಯ್ಯನಮಠ, ಬಸಯ್ಯ ಹಿರೇಮಠ, ಎ.ವಿ.ಕಣವಿ, ಸಮುದಾಯ ಜಿಲ್ಲಾಧ್ಯಕ್ಷ ಗವಿಸಿದ್ದಪ್ಪ ಹೂಗಾರ, ಮುಖಂಡರಾದ ರಮೇಶ ಹೂಗಾರ, ವಿರೂಪಾಕ್ಷಪ್ಪ ಹೂಗಾರ, ವೀರೇಶ ಹೂಗಾರ, ವೆಂಕಪ್ಪ ಹೂಗಾರ, ಸಂಗಪ್ಪ ಹೂಗಾರ, ತೇಜಪ್ಪ ಹೂಗಾರ ಇತರರಿದ್ದರು.