ಕೊಪ್ಪಳ: ನನ್ನ ಕ್ಷೇತ್ರದಲ್ಲಿನ ಬಿಪಿಎಲ್ ಕಾರ್ಡ್ ಹೊಂದಿರುವ ಕರೊನಾ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಅವರ ಸಂಪೂರ್ಣ ವೆಚ್ಚವನ್ನು ವೈಯಕ್ತಿಕವಾಗಿ ನಾನೇ ಭರಿಸುವೆ. ಅದರಂತೆ ಕೊಪ್ಪಳ ಜಿಲ್ಲೆಯ ಪ್ರತಿನಿಧಿಗಳು ಸಹಾಯಸ್ತ ಚಾಚಲಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದರು.
ನಗರದ ಕೋವಿಡ್ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬಡವರಿಗೆ ಸಹಾಯ ಮಾಡುವುದು ಅವರವರ ವೈಯಕ್ತಿಕ ನಿರ್ಧಾರ . ಇಲ್ಲಿನ ಜನಪ್ರತಿನಿಧಿಗಳಿಗೂ ಬಡವರ ಸಂಕಷ್ಟಕ್ಕೆ ಕೈ ಜೋಡಿಸಲಿ. ಜಿಲ್ಲೆಯಲ್ಲಿ ನಿತ್ಯ 400 ಪ್ರಕರಣ ವರದಿಯಾಗುತ್ತಿವೆ. ಸದ್ಯ ಆಕ್ಸಿಜನ್, ವೆಂಟಿಲೇಟರ್, ಬೆಡ್ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ. ಮುಂದಿನ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಹೊರಗಿನಿಂದ ಬಂದವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಬೇಕು. ಈಗಾಗಲೇ ಜಿಲ್ಲೆಯಲ್ಲಿ 1655 ಜನರನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ದೊಡ್ಡ ಮನೆ ಇರುವ ಶ್ರೀಮಂತರಿಗೆ ಹೋಮ್ ಐಸೋಲೇಷನ್ ಮಾಡಬಹುದು. ಆದರೆ, ಚಿಕ್ಕ ಮನೆ ಇರುವವರಿಗೆ ಮನೆಯಲ್ಲಿ ಚಿಕಿತ್ಸೆ ನೀಡುವುದು ಕಷ್ಟ. ಹೀಗಾಗಿ ಹೆಚ್ಚುವರಿ ಕೋವಿಡ್ ಕೇರ್ ಸೆಂಟರ್ ಆರಂಭಿಸಿ ಚಿಕಿತ್ಸೆ ನೀಡಲಾಗುವುದು ಎಂದರು. ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಸಿಇಒ ರಘುನಂದನ್ಮೂರ್ತಿ, ಎಸ್ಪಿ ಟಿ.ಶ್ರೀಧರ್ ಸೇರಿ ಇತರರಿದ್ದರು.