ಪರಸ್ಪರ ಅಂತರ ಕಾಪಾಡುವಂತೆ ಸ್ಥಳೀಯಾಡಳಿತದಿಂದ ಜಾಗೃತಿ
ಕೊಪ್ಪಳ: ನಗರ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ನಾಗರ ಪಂಚಮಿ ಅಂಗವಾಗಿ ಮಹಿಳೆಯರು, ಯುವತಿಯರು ಮತ್ತು ಮಕ್ಕಳು ನಾಗರಾಜನಿಗೆ ಹಾಲೆರೆದು ಭಕ್ತಿ ಪ್ರದರ್ಶಿಸಿದರು.
ಕರೊನಾ ಇರುವ ಕಾರಣ, ಪ್ರತಿ ವರ್ಷದಂತೆ ಈ ವರ್ಷ ಗುಂಪು ಗುಂಪಾಗಿ ಸೇರಿ ಹಾಲೆರೆಯುವುದು, ರೊಟ್ಟಿ, ಆಹಾರ ಪದಾರ್ಥಗಳ ಪರಸ್ಪರ ಹಂಚಿಕೊಳ್ಳುವುದು ಮಾಡಬಾರದು. ಬದಲಿಗೆ ತಮ್ಮ ತಮ್ಮ ಮನೆಯಲ್ಲಿಯೇ ಹಬ್ಬ ಆಚರಿಸಿಕೊಳ್ಳಬೇಕು. ಹಾಲೆರೆವಾಗಲು ಪರಸ್ಪರ ಅಂತರ ಕಾಯ್ದುಕೊಂಡು ಆಚರಣೆ ಮಾಡುವಂತೆ ಆಯಾ ಸ್ಥಳೀಯಾಡಳಿತಗಳು ಜಾಗೃತಿ ಮೂಡಿಸಿದ್ದವು. ಹೀಗಾಗಿ ಹಬ್ಬದ ಸಂಭ್ರಮ ಕೊಂಚ ಮಾಸಿದರೂ, ಪದ್ಧತಿಯಂತೆ ಜನರು ನಾಗಪ್ಪನಿಗೆ ಹಾಲೆರೆದರು. ಕೊಪ್ಪಳ ನಗರದ ಗವಿಮಠ ಸೇರಿ ವಿವಿಧೆಡೆ ಇರುವ ನಾಗರ ಮೂರ್ತಿ, ಹುತ್ತಗಳಿಗೆ ಪೂಜೆ ಸಲ್ಲಿಸಲಾಯಿತು. ಮಹಿಳೆಯರು, ಮಕ್ಕಳೆನ್ನದೇ ಎಲ್ಲರೂ ತಮ್ಮ ಪಾಲಿನ ಹಾಲೆರೆದು ಇಷ್ಟಾರ್ಥ ಸಿದ್ಧಿಗೆ ದೇವರಲ್ಲಿ ಪ್ರಾರ್ಥಿಸಿದರು.
ಗ್ರಾಮೀಣ ಪ್ರದೇಶಗಳಲ್ಲೂ ವಿವಿಧ ದೇವಸ್ಥಾನಗಳು, ಹೊಲಗಳಲ್ಲಿನ ಹುತ್ತ, ನಾಗರಮೂರ್ತಿಗಳಗೆ ಹಾಲೆರೆಯುವುದು ಕಂಡುಬಂತು. ಬನ್ನಿ, ಬೇವಿನ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಮಕ್ಕಳು ಗಿಡಗಳಿಗೆ ಜೋಕಾಲಿ ಕಟ್ಟಿ ಜೀಕುವ ಮೂಲಕ ಖುಷಿಪಟ್ಟರು.