ಕೊಪ್ಪಳ: ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಎಸ್ಪಿ ಟಿ.ಶ್ರೀಧರ್ ಚಾಲನೆ ನೀಡಿದರು.
ನಗರದ ಅಶೋಕ ವೃತ್ತದಿಂದ ಸುಮಾರು 100ಕ್ಕೂ ಅಧಿಕ ಪೊಲೀಸರು ಹೆಲ್ಮೆಟ್ ಧರಿಸಿ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡರು. ಸ್ವತಃ ಎಸ್ಪಿ ಬೈಕ್ ಹತ್ತಿ ರ್ಯಾಲಿ ಮುನ್ನಡೆಸಿದರು. ಅಶೋಕ ವೃತ್ತದಿಂದ ಆರಂಭವಾದ ರ್ಯಾಲಿ, ಬಸವೇಶ್ವರ ವೃತ್ತ, ಗಡಿಯಾರ ಕಂಬ ವೃತ್ತ, ಬಸ್ನಿಲ್ದಾಣ, ಭಾಗ್ಯನಗರ ಮಾರ್ಗವಾಗಿ ಸಾಗಿತು. ಗೃಹ ರಕ್ಷಕ ದಳದವರು ನಗರದ ವಿವಿಧ ವೃತ್ತಗಳಲ್ಲಿ ರಸ್ತಾ ಸುರಕ್ಷತಾ ಫಲಕಗಳನ್ನು ಹಿಡಿದು ಪಾದಯಾತ್ರೆ ಮಾಡಿ ಜಾಗೃತಿ ಮೂಡಿಸಿದರು. ರಸ್ತೆ ಸುರಕ್ಷತೆ ನಿಯಮ ಪಾಲನೆ ಮಾಡದಿರುವುದು ಹಾಗೂ ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವುದರಿಂದ ಜಿಲ್ಲೆಯಲ್ಲಿ ಅಪಘಾತಗಳು, ಸಾವು ನೋವು ಹೆಚ್ಚುತ್ತಿದೆ.
ಹೆಲ್ಮೆಟ್ ಧರಿಸಿ ಬೈಕ್ ಓಡಿಸುವುದು, ಸೀಟ್ ಬೆಲ್ಟ್ ಧರಿಸುವಿಕೆ, ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸದಂತೆ ಜಾಗೃತಿ ಮೂಡಿಸಲಾಗುತ್ತಿದೆ. ರ್ಯಾಲಿಯಲ್ಲಿ ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ವಿಶ್ವನಾಥ ಹಿರೇಗೌಡರ್, ನಗರಠಾಣೆ ಪಿಐ ಮಾರುತಿ ಗುಳ್ಳಾರಿ, ಟ್ರಾಫಿಕ್ ಪಿಎಸ್ಐ ವೆಂಕಟೇಶ, ಫಕೀರಮ್ಮ, ಮಹಾಂತೇಶ ಮೇಟಿ ಇತರರಿದ್ದರು.