More

    ರೈಲು ನಿಲ್ದಾಣದ ಉಚಿತ ವೈಫೈ ಬಳಸಿ ಸ್ಪರ್ಧಾತ್ಮಕ ಪರೀಕ್ಷೆ ಪಾಸಾದ ಕೂಲಿಕಾರ್ಮಿಕ!

    ಕೊಚ್ಚಿನ್ (ಕೇರಳ): ಕೆಎಎಸ್, ಐಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಪಾಸಾಗುವುದೆಂದರೆ ಸುಮ್ಮನೆ ಮಾತಲ್ಲ. ಅದರಲ್ಲಿ ಪಾಸಾಗುವುದು ಅತ್ಯಂತ ಕಠಿಣ. ಹೀಗಾಗಿಯೇ ಸಾಕಷ್ಟು ಜನ ಬೇರೆ ಬೇರೆ ಅಕಾಡೆಮಿಗಳಿಗೆ ಸೇರಿಕೊಂಡು ವರ್ಷಗಟ್ಟಲೇ ತರಬೇತಿ ಪಡೆಯುತ್ತಾರೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಇಲ್ಲೊಬ್ಬ ಯುವ ಕೂಲಿ ಕಾರ್ಮಿಕ ಇದಾವುದೂ ಇಲ್ಲದೇ ಕೇರಳದ ಕೆಪಿಎಸ್‌ಸಿ ಪರೀಕ್ಷೆ ಪಾಸಾಗಿ ಅಚ್ಚರಿ ಮೂಡಿಸಿದ್ದಾನೆ.

    ಕೇರಳದ ಕೆ. ಶ್ರೀನಾಥ್ ಎಂಬ ಈ ಕೂಲಿ ಕಾರ್ಮಿಕ ತಾನು ಕೆಲಸ ಮಾಡುವ ರೈಲ್ವೆ ನಿಲ್ದಾಣಗಳಲ್ಲಿ ಲಭ್ಯವಿರುವ ಉಚಿತ ವೈ-ಫೈ ಸಹಾಯದಿಂದಲೇ ಓದಿ ಕೆಪಿಎಸ್‌ಸಿ (ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್) ಪರೀಕ್ಷೆಯನ್ನು ಭೇದಿಸಿರುವುದು ವಿಶೇಷ. ಮುನ್ನಾರ್ ಮೂಲದ ಶ್ರೀನಾಥ್, ಕೊಚ್ಚಿನ್ ರೈಲು ನಿಲ್ದಾಣದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದ. ತನಗೆ ಮತ್ತು ತನ್ನ ಕುಟುಂಬಕ್ಕೆ ಉತ್ತಮ ಜೀವನ ಕಲ್ಪಿಸಿಕೊಳ್ಳಲು ಹಾತೊರೆಯುತ್ತಿದ್ದ ಶ್ರೀನಾಥ್ ಸರ್ಕಾರಿ ಉದ್ಯೋಗ ಪಡೆಯುವುದಕ್ಕಾಗಿ ಅಧ್ಯಯನ ಮಾಡಲು ಪ್ರಾರಂಭಿಸಿದ.

    ಎಷ್ಟೇ ಪ್ರಯತ್ನ ಪಟ್ಟರೂ ಸರಿಯಾಗಿ ಒಂದೆಡೆ ಕುಳಿತು ಓದಲು ಶ್ರೀನಾಥ್‌ಗೆ ಸಾಧ್ಯವೇ ಆಗುತ್ತಿರಲಿಲ್ಲ. ಆತನ ಕೆಲಸದ ಸ್ವರೂಪವೇ ಹಾಗಿತ್ತು. ಸಮಯದ ಅಭಾವದಿಂದಾಗಿಯೂ ಕೆಲವೊಮ್ಮೆ ಓದಲು ಆಗುತ್ತಿರಲಿಲ್ಲ. ಆಗ ಅಧ್ಯಯನ ಮಾಡಲು ಆತ ಸ್ವತಃ ಒಂದು ದಾರಿ ಕಂಡುಕೊಂಡ. 2016ರಲ್ಲಿ, ರೈಲ್‌ಟೆಲ್ ಮತ್ತು ಭಾರತದ ಹಲವಾರು ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಆರಂಭವಾಯಿತು. ಅದನ್ನು ಸಮರ್ಥವಾಗಿ ಶ್ರೀನಾಥ್ ಬಳಸಿಕೊಳ್ಳತೊಡಗಿದ. ಕೆಲಸ ಮಾಡುವಾಗಲೇ ಅಧ್ಯಯನ ಮಾಡಲು ಇದರಿಂದ ಸಾಧ್ಯವಾಯಿತು. ತನ್ನ ಅಧ್ಯಯನಕ್ಕೆ ಸಂಬಂಧಿಸಿದ ಆಡಿಯೊ ಬುಕ್‌ಗಳು ಮತ್ತು ವಿಡಿಯೊಗಳನ್ನು ಈ ಉಚಿತ ವೈಫೈನಿಂದಲೇ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದ ಶ್ರೀನಾಥ್‌ಗೆ ಕೆಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುವುದು ಸುಲಭವಾಯಿತು.

    ಕೋಚಿಂಗ್ ಮತ್ತು ಹೆಚ್ಚುವರಿ ತರಗತಿಗಳಿಗೆ ಖರ್ಚು ಮಾಡುವುದಕ್ಕೆ ಶ್ರೀನಾಥ್ ಬಳಿ ಅಷ್ಟು ಹಣವೂ ಇರಲಿಲ್ಲ. ದುಡಿದು ಗಳಿಸುತ್ತಿದ್ದ ಅಲ್ಪ ಹಣವನ್ನು ಆತ ತನ್ನ ಮೆಮೊರಿ ಕಾರ್ಡ್, ಮೊಬೈಲ್ ಫೋನ್ ಮತ್ತು ಒಂದು ಜೋಡಿ ಇಯರ್‌ಫೋನ್‌ಗಳಿಗೆ ಖರ್ಚು ಮಾಡಿದ. ಪರೀಕ್ಷೆಗಳಿಗೆ ತಯಾರಿ ನಡೆಸಿದ ನಂತರ, ಗ್ರಾಮ ಸಹಾಯಕರ ಹುದ್ದೆಗೆ ಕೇರಳ ಸಾರ್ವಜನಿಕ ಸೇವಾ ಪರೀಕ್ಷೆಗೆ ಹಾಜರಾಗಿದ್ದ ಮತ್ತು ಒಟ್ಟು ಶೇಕಡಾ 82 ಅಂಕಗಳೊಂದಿಗೆ ಉತ್ತೀರ್ಣನಾದ. ಶ್ರೀನಾಥ್ ಅವರ ಸಾಧನೆಯನ್ನು ಗೂಗಲ್ ಇಂಡಿಯಾ ಹಿಂದೊಮ್ಮೆ ಹಂಚಿಕೊಂಡಾಗ ಅವರನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಅಭಿನಂದಿಸಿದ್ದರು. ಈಗಿನ ಯುವಪೀಳಿಗೆಗೆ ಶ್ರೀನಾಥ್ ಅವರ ಕಥೆ ಸ್ಫೂರ್ತಿದಾಯಕವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts