ಕೊಂಡ್ಲಹಳ್ಳಿ: ಶಿಕ್ಷಕರು ಮಾತೃಹೃದಯಿಗಳಾಗಿ ಮಕ್ಕಳಿಗೆ ಬೋಧಿಸಬೇಕು ಎಂದು ಇಸಿಒ ಎಚ್.ಜೆ.ಓಂಕಾರಪ್ಪ ತಿಳಿಸಿದರು.
ಇಲ್ಲಿನ ಹಿಪೋಕ್ಯಾಂಪಸ್ ಶಾಲೆಯ 5ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅಕ್ಷರ ಕಲಿಸುವ ಶಿಕ್ಷಕ ವೃತ್ತಿ ಪುಣ್ಯದ ಕೆಲಸ. ಪಾಲಕರು ತಮ್ಮ ಮಕ್ಕಳ ಪ್ರತಿಭೆ ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದರು.
ಚಳ್ಳಕೆರೆ ಇಸಿಒ ಬಿ.ಪಿ.ಮಾರುತಿ ಮಾತನಾಡಿ, ಪ್ರತಿ ಮಗುವಿನಲ್ಲೂ ಭಿನ್ನತೆ, ವಿಶೇಷ ಜ್ಞಾನವಿರುತ್ತದೆ. ಇದನ್ನು ಗುರುತಿಸಿ ಪೋಷಣೆ ಮಾಡುವಲ್ಲಿ ಶಿಕ್ಷಕರು ಕಾಳಜಿ ವಹಿಸಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಡಿ.ಷಡಕ್ಷರಪ್ಪ ಮಾತನಾಡಿ, ಶಾಲೆಯಲ್ಲಿ ಪಠ್ಯ ವಿಷಯ ಬೋಧಿಸುವ ಶಿಕ್ಷಕರಂತೆ ಮನೆಯಲ್ಲಿ ಪಾಲಕರು ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದು ತಿಳಿಸಿದರು.
ಪ್ರದೇಶ ಕುರುಬರ ಸಂಘದ ನಿರ್ದೇಶಕ ಎಸ್.ಕೆ.ಗುರುಲಿಂಗಪ್ಪ, ಹಿಪೋಕ್ಯಾಂಪಸ್ ಕ್ಲಸ್ಟರ್ ಮ್ಯಾನೇಜರ್ ಚೇತನ್, ಕೋಆರ್ಡಿನೇಟರ್ ಬಿ.ಟಿ.ನಾಗಭೂಷಣ್, ಯುವ ಮುಖಂಡ ಎಚ್.ಎನ್.ದೇವರಾಜ್, ಶಿಕ್ಷಕಿಯರಾದ ರಾಜೇಶ್ವರಿ, ಜಯಲಕ್ಷ್ಮಿ, ವರಲಕ್ಷಿ, ಸುನಿತಾ ಇತರರಿದ್ದರು.