ಕೊಂಡ್ಲಹಳ್ಳಿ: ಸರ್ಕಾರಿ ಆಸ್ಪತ್ರೆಗಳ ಕಾಯಕಲ್ಪ ಕಾರ್ಯಕ್ರಮದಡಿ ಬಾಹ್ಯ ಅಭಿವೃದ್ಧಿ ಕಾರ್ಯಗಳ ಪರಿಶೀಲನಾ ತಂಡವು ಮಂಗಳವಾರ ಕೊಂಡ್ಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸೌಕರ್ಯಗಳ ಪರಿಶೀಲನೆ ನಡೆಸಿತು.
ಆರೋಗ್ಯ ಕೇಂದ್ರದ ಉನ್ನತೀಕರಣ, ಜೀವ ವೈದ್ಯಕೀಯ, ತ್ಯಾಜ್ಯ ವಸ್ತು ವಿಲೇವಾರಿ, ಸೋಂಕು ನಿಯಂತ್ರಣ, ನೈರ್ಮಲ್ಯ, ಸಮುದಾಯದ ಸಹಭಾಗಿತ್ವ, ವೈದ್ಯಕೀಯ ಸೇವೆ, ಆರೋಗ್ಯ ಇಲಾಖೆ ರಾಷ್ಟ್ರೀಯ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಮೌಲ್ಯಮಾಪನ ನಡೆಸಿತು.
ಆಸ್ಪತ್ರೆಯ ಹೊರ ಮತ್ತು ಒಳಾಂಗಣ ಸ್ವಚ್ಛತೆ, ಆವರಣದಲ್ಲಿ ಹಸಿರು ಪರಿಸರ ಇತರ ಪ್ರಗತಿ ಕಾರ್ಯಗಳ ಬಗ್ಗೆ ರಾಜ್ಯ ಮಟ್ಟದ ಮೌಲ್ಯಮಾಪನ ತಂಡವು, ಮೆಚ್ಚುಗೆ ವ್ಯಕ್ತಪಡಿಸಿತು.
ಜಿಲ್ಲಾ ಕಾಯಕಲ್ಪ ವ್ಯವಸ್ಥಾಪಕಿ ಡಾ.ರೇಖಾ ಮಾತನಾಡಿ, ಜಿಲ್ಲೆಯ ಕೊಂಡ್ಲಹಳ್ಳಿ, ಅಶೋಕ ಸಿದ್ಧಾಪುರ, ದೊಡ್ಡ ಉಳ್ಳಾರ್ತಿ, ಚನ್ನಮ್ಮನಾಗತಿಹಳ್ಳಿ, ಸಾಣಿಕೆರೆ, ಜಾಜೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೌಲ್ಯಮಾಪನ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಶಿವಕುಮಾರ್ ಹಾಗೂ ಸಿಬ್ಬಂದಿ ಇದ್ದರು.