ಕಾಮಸಮುದ್ರ: ಹೋಬಳಿಯ ಗಡಿಯಂಚಿನ ಗ್ರಾಮಗಳಲ್ಲಿ ಆನೆ ದಾಳಿ ಮುಂದುವರಿದಿದ್ದು, ಭಾನುವಾರ ಮತ್ತೆ ದೋಣಿಮಡಗು ಪಂಚಾಯಿತಿಯ ಮಲ್ಲೇಶನಪಾಳ್ಯ ಗ್ರಾಮದಲ್ಲಿ ತೋಟಗಳಿಗೆ ಲಗ್ಗೆಯಿಟ್ಟು ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ ಮಾಡಿವೆ.
ರೈತ ಸುರೇಶ್ ಅವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ರಾಗಿ, ಅರ್ಧ ಎಕರೆಯಲ್ಲಿ ಬೆಳೆದಿದ್ದ ಹುರುಳಿ, ಪಪ್ಪಾಯ ಮತ್ತು ಬಾಳೆಗಿಡ ಹಾಗೂ ನೀರಿನ ಪೈಪ್ ನಾಶ ಮಾಡಿವೆ.
ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿಭಾಗದ ಮಲ್ಲೇಶನಪಾಳ್ಯ ಗ್ರಾಮ ಸುತ್ತ ದಟ್ಟವಾದ ಅರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಈ ಭಾಗದಲ್ಲಿ ಕಾಡಾನೆಗಳು ನಿರಂತರ ದಾಳಿ ಮಾಡುತ್ತಲೇ ಇರುತ್ತವೆ. ಕಳೆದ ತಿಂಗಳು ಇದೇ ಗ್ರಾಮದ ತಿಮ್ಮರಾಯಪ್ಪ ಎಂಬುವವರು ಕಾಡಾನೆ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ.
3 ತಿಂಗಳಿಂದ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ನಾಶ ಮಾಡಿವೆ. ಕಾಡಾನೆ ಹಾವಳಿ ನಿರಂತರ ನಡೆಯುತ್ತಿದ್ದರೂ ಸರ್ಕಾರ ಗಮನಹರಿಸುತ್ತಿಲ್ಲ. ಅಧಿಕಾರಿಗಳು ಭರವಸೆ ನೀಡುತ್ತಾರೆಯೇ ಹೊರತು ಇದುವರೆಗೂ ನಷ್ಟದ ಪರಿಹಾರ ನೀಡಿಲ್ಲ.
ಸುರೇಶ್, ರೈತ