More

    ವೈದ್ಯಕೀಯ ಕಿಟ್ ಖರೀದಿ ಆರೋಪ ಹಾಸ್ಯಾಸ್ಪದ

    ಕಾಂಗ್ರೆಸ್ ವಿರುದ್ಧ ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ ಅಸಮಾಧಾನ

    ಮಡಿಕೇರಿ: ಕರೊನಾ ನಿರ್ವಹಣಾ ವೈದ್ಯಕೀಯ ಕಿಟ್ ಖರೀದಿ ವ್ಯವಹಾರದಲ್ಲಿ ಸರ್ಕಾರ ಅವ್ಯವಹಾರ ನಡೆಸಿದೆ ಎನ್ನುವ ಕಾಂಗ್ರೆಸ್ ಆರೋಪ ಹಾಸ್ಯಾಸ್ಪದ ಎಂದು ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ ಅಸಮಾಧಾನ ವ್ಯಕ್ತಪಡಿಸಿದರು.
    ಕರೊನಾದ ಕಪಿಮುಷ್ಠಿಯಲ್ಲಿ ರಾಜ್ಯ ಸಿಲುಕಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ, ಸಚಿವರು, ಶಾಸಕರು, ಸಂಸದರು, ಎಂಎಲ್ಸಿ, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಕಾಳಜಿ ಪರಿಗಣಿಸದೆ ಕಾಂಗ್ರೆಸ್ ಉಸ್ತುವಾರಿ ವೆಂಕಪ್ಪಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್‌ಕುಮಾರ್ ಆಧಾರ ರಹಿತ ಆರೋಪ ಮಾಡಿರುವುದು ಖಂಡನೀಯ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
    ನಾಲ್ಕೈದು ತಿಂಗಳಿಂದ ವಿಶ್ವದ ವೈದ್ಯಕೀಯ ಕ್ಷೇತ್ರ ವೈರಸ್‌ನ ನಿರ್ಮೂಲನೆಗಾಗಿ ಶ್ರಮಿಸುತ್ತಿದ್ದರೆ ಕೆ.ಕೆ.ಮಂಜುನಾಥ್‌ಕುಮಾರ್ ಕರೊನಾ ಇರುವುದೇ ಅನುಮಾನ ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ. ಇದು ವೈದ್ಯ ಲೋಕವನ್ನು ಅನುಮಾನಿಸಿದಂತೆ ಮಾತ್ರವಲ್ಲದೆ, ಜನರನ್ನು ಗೊಂದಲಕ್ಕೆ ಸಿಲುಕಿಸುವ ಪ್ರಯತ್ನ ಎಂದು ಟೀಕಿಸಿದರು.
    ದೇಶದಲ್ಲಿ ಕರೊನಾ ವ್ಯಾಪಿಸುವುದಕ್ಕೆ ಮೊದಲೇ ಆಗ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರ 1 ವೆಂಟಿಲೇಟರ್‌ಗೆ 22 ಲಕ್ಷ ರೂ. ನೀಡಿ ಖರೀದಿಸಿದೆ. ಇದರ ಬಗ್ಗೆ ಮೊದಲು ತನಿಖೆ ಆಗಬೇಕು. ಕರೊನಾವನ್ನು ನಿಯಂತ್ರಿಸಲು ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಎಷ್ಟು ಕಾರ್ಯೋನ್ಮುಖರಾಗಿದ್ದಾರೆ ಎನ್ನುವುದು ಜಿಲ್ಲೆಯ ಜನರಿಗೆ ತಿಳಿದಿದೆ. ಜನಪ್ರತಿನಿಧಿಗಳು ನಡೆಸಿರುವ ಜನಪರ ಕಾಳಜಿಯ ಸಭೆಗಳ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಜಿಲ್ಲಾಡಳಿತದಿಂದ ಮಾಹಿತಿ ಪಡೆದುಕೊಳ್ಳಲಿ ಎಂದರು.
    ಕೊಡಗು ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಪ್ರಧಾನ ಮಂತ್ರಿ ನರೇಂದ್ರಮೋದಿ ಅವರನ್ನು ಮೆಚ್ಚುವ ತಂಡ ಕಾಂಗ್ರೆಸ್‌ನಲ್ಲಿದೆ. ಅಲ್ಲಿನ ಬಂಡಾಯದಿಂದ ಬೇಸತ್ತಿರುವ ಮಂಜುನಾಥ್ ಕುಮಾರ್ ಕಾರ್ಯಕರ್ತರ ಗಮನ ಬೇರೆಡೆ ಸೆಳೆಯಲು ಇಲ್ಲಸಲ್ಲದ ಆರೋಪದಲ್ಲಿ ತೊಡಗಿದ್ದಾರೆ ಎಂದು ವ್ಯಂಗ್ಯವಾಡಿದರು.
    ಕರೊನಾ ವ್ಯಾಪಿಸುವುದನ್ನು ತಡೆಯುವಲ್ಲಿ ಜಿಲ್ಲಾಡಳಿತ ಹೆಚ್ಚು ಕಾರ್ಯಪ್ರವೃತ್ತವಾಗಿದೆ. ಆದರೆ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಜಿಲ್ಲಾಡಳಿತ ವಿಫಲವಾಗಿದೆ ಎಂದು ಟೀಕಿಸುತ್ತಿದ್ದು, ಇದು ಖಂಡನೀಯ. ಸಂಕಷ್ಟದ ಪರಿಸ್ಥಿತಿಯಲ್ಲಿ ಅಧಿಕಾರಿಗಳ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ಮಾಡಬೇಕೇ ಹೊರತು ಪ್ರಚಾರ ಗಿಟ್ಟಿಸಿಕೊಳ್ಳುವುದಕ್ಕಾಗಿ ಅಪಪ್ರಚಾರ ಮಾಡಬಾರದೆಂದು ಸಲಹೆ ನೀಡಿದರು.
    ಕರೊನಾ ವೈರಸ್ ಇಡೀ ವಿಶ್ವದ ವಿರುದ್ಧ ಸಮರ ಸಾರಿರುವಾಗ ಇದನ್ನು ನಿರ್ಮೂಲನೆ ಮಾಡಲು ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ಕ್ಷುಲ್ಲಕ ರಾಜಕಾರಣ ಮಾಡಬಾರದು ಎಂದರು.
    ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಸ್.ಸಿ.ಸತೀಶ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಪ್ಪಣ್ಣ, ಉಮೇಶ್ ಸುಬ್ರಹ್ಮಣಿ, ಮಾಧ್ಯಮ ಸಹ ಸಂಚಾಲಕ ಶಜೀಲ್ ಕೃಷ್ಣ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts