ವಿರಾಜಪೇಟೆ: ಮಾನಸಿಕ ಹಾಗೂ ದೈಹಿಕ ಸಮತೋಲನ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ವಿರಾಜಪೇಟೆ ಫ್ರೆಂಡ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕೊಡಗು ಜಿಲ್ಲಾ ಮುಸ್ಲಿಂ ಕಪ್ 2ನೇ ವರ್ಷ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಯುವ ಸಮೂಹ ಮೊಬೈಲ್ ಗೀಳಿನಲ್ಲಿ ಮುಳುಗಿದ್ದು, ಕ್ರೀಡೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುವುದು ಕ್ಷೀಣಿಸಿದೆ. ಯುವ ಸಮೂಹ ಕ್ರೀಡೆಗಳಲ್ಲಿ ಭಾಗವಹಿಸುವಂತಾಗಬೇಕು. ಶರೀರದ ಸಮತೋಲನ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ ಎಂದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹನೀಫ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೊಳುಮಂಡ ರಫೀಕ್, ವಿರಾಜಪೇಟೆ ಪುರಸಭೆ ಸದಸ್ಯ ಅಬ್ದುಲ್ ಜಲೀಲ್, ಎನ್.ಸಿ.ಟಿ. ಗ್ರೂಪ್ ವ್ಯವಸ್ಥಾಪಕ ಹನೀಫ್, ಫ್ರೆಂಡ್ಸ್ ಬ್ಯಾಡ್ಮಿಂಟನ್ ಸಂಸ್ಥೆ ವಿರಾಜಪೇಟೆ ಅಧ್ಯಕ್ಷ ರಾವೂಫ್ ಉಪಸ್ಥಿತರಿದ್ದರು.
ವಿಜೇತರು: ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿರಾಜಪೇಟೆ ಜಾವೀದ್ ಮತ್ತು ಇರ್ಷಾದ್ ಜೋಡಿ ಪ್ರಥಮ, ಸುಂಟಿಕೊಪ್ಪದ ಹರ್ಷಾದ್ ಮತ್ತು ಜಂಷಾದ್ ಜೋಡಿ ದ್ವಿತೀಯ, ಮುಸ್ತಾಫ ಮತ್ತು ರಿಯಾಜ್ ಜೋಡಿ ತೃತೀಯ, ವಿರಾಜಪೇಟೆಯ ನವಾಫ್ ಮತ್ತು ಯೂನಸ್ ಜೋಡಿ ನಾಲ್ಕನೇ ಸ್ಥಾನ ಪಡೆಯಿತು. ಪ್ರಥಮ ಸ್ಥಾನ ಪಡೆದ ಜೋಡಿಗೆ ಟ್ರೋಫಿ ಹಾಗೂ 15,000 ರೂ. ನಗದು, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ಹಾಗೂ 10,000 ರೂ. ನಗದು, ತೃತೀಯ ಸ್ಥಾನ ಗಳಿಸಿದ ತಂಡಕ್ಕೆ ಟ್ರೋಫಿ ಹಾಗೂ 5000 ರೂ. ನಗದು ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ನೀಡಿ ಗೌರವಿಸಲಾಯಿತು. ಪಂದ್ಯಾವಳಿಯ ಉತ್ತಮ ಆಟಗಾರ ಪ್ರಶಸ್ತಿಗೆ ಯೂನಸ್ ವಿರಾಜಪೇಟೆ ಮತ್ತು ರಫೀಕ್ ಕುಶಾಲನಗರ ಆಯ್ಕೆಗೊಂಡರು. ಪಿ.ಎಂ.ಲತೀಫ್ ಹಿರಿಯ ಆಟಗಾರ ಪ್ರಶಸ್ತಿಯನ್ನು ತನ್ನಾದಾಗಿಸಿಕೊಂಡರು. ಪಂದ್ಯಾವಳಿಯಲ್ಲಿ ಒಟ್ಟು 52 ತಂಡಗಳು ಭಾಗವಹಿಸಿದ್ದವು.