ಕೊಡೇಕಲ್: ಸಮೀಪದ ರಾಜನಕೋಳೂರದಲ್ಲಿ ಮಲ್ಲಯ್ಯನ ಜಾತ್ರೋತ್ಸವ ನಿಮಿತ್ತ ಬುಧವಾರ ವೈಭವದಿಂದ ಜರುಗಿದ ಪಲ್ಲಕ್ಕಿ ಉತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.
ಜಾತ್ರೆ ನಿಮಿತ್ತ ಬುಧವಾರ ಸಿಬಾರ ಕಟ್ಟೆಗೆ ತೆರಳಿದ ಮಲ್ಲಯ್ಯ ದೇವರು ನಂತರ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ದಾರಿಯುದ್ಧಕ್ಕೂ ಏಳು ಕೋಟಿಗೆ ಏಳು ಕೋಟಿಗೆ ಎಂಬ ಜೈ ಘೋಷದೊಂದಿಗೆ ಹೊರಟ ಮೆರವಣಿಗೆಯಲ್ಲಿ ಸುಮಂಗಲೆಯರು ಭಕ್ತಿಯಿಂದ ಭಂಡಾರವನ್ನು ಪಲ್ಲಕ್ಕಿ ಮೇಲೆ ಹಾಕುತ್ತಾ ಸಾಗಿದರು.
ಬನ್ನಿ ಮಂಟಪಕ್ಕೆ ತೆರಳಿದ ಪಲ್ಲಕ್ಕಿಗೆ ವಿಶೇಷ ಪೂಜೆ ನಡೆದು ಶಮೀ ವೃಕ್ಷದ ಪೂಜೆಯೊಂದಿಗೆ ಪುನಃ ಮಲ್ಲಯ್ಯನ ಮೆರವಣಿಗೆ ಸಾಗಿ ಮೂಲ ಸ್ಥಾನಕ್ಕೆ ತಲುಪಿತು.
ವಿಶೇಷ ಮಂಗಳಾರುತಿಯೊಂದಿಗೆ ಮಲ್ಲಯ್ಯನ ಪಲ್ಲಕ್ಕಿ ಉತ್ಸವ ಮುಗಿದ ನಂತರ ದಸರಾ ಉತ್ಸವಕ್ಕೆ ಚಾಲನೆ ದೊರಕಿತು. ಜನರು ಮೊದಲು ದೇವರಿಗೆ ಬನ್ನಿ ಸಮರ್ಪಣೆ ಮಾಡಿದ ಬಳಿಕ ಹಿರಿಯರಿಗೆ ಬನ್ನಿ ವಿನಿಮಯ ಮಾಡಿ ಪರಸ್ಪರ ಅಭಿನಂದಿಸುವುದು ಇಲ್ಲಿನ ವಾಡಿಕೆ. ಉತ್ಸವದಲ್ಲಿ ಗ್ರಾಮದ ವತನದಾರರು, ಪ್ರಮುಖರು ಹಾಗೂ ಎಲ್ಲ ಧರ್ಮೀಯರ ಪಾಲ್ಗೊಂಡು ಐಕ್ಯತೆ ಮೆರದರು. ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳು, ಗ್ರಾಪಂನವರು ಜಾತ್ರೆ ಸಂದರ್ಭದಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದರು.
ಗದಗಿನ ಖ್ಯಾತ ಡೊಳ್ಳು ಕಲಾವಿದರು ವಿಶೇಷ ಪ್ರದರ್ಶನ ನೀಡಿ ಮಲ್ಲಯ್ಯನ ಜಾತ್ರೆಗೆ ವಿಶೇಷ ಕಳೆ ತಂದರು.