ಬಾಗಲಕೋಟೆ: ಸಂಕ್ರಾಂತಿ ಸಹಿತ ಹಲವು ಹಬ್ಬಗಳಿಗೆ ಇರುವ ವೈಜ್ಞಾನಿಕ ಹಿನ್ನೆಲೆಯನ್ನು ವಿದ್ಯಾರ್ಥಿಗಳು ಅರಿತು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಕಾಲೇಜು ಉಪವಿಭಾಗದ ಅಧ್ಯಕ್ಷ ಡಾ.ಪಿ.ಆರ್.ಜೋಶಿ ಅಭಿಪ್ರಾಯಪಟ್ಟರು. ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ಸಾಂಸ್ಕೃತಿಕ ಚಟುವಟಿಕೆ ವಿಭಾಗ ಮಂಗಳವಾರ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಹಿರಿಮೆ-ಗರಿಮೆಯಾಗಿದೆ. ಹಬ್ಬಗಳನ್ನು ಆಚರಿಸುವುದರ ಮೂಲಕ ಸಂಸ್ಕೃತಿಯನ್ನು ಮೆಲುಕು ಹಾಕಿ,ನಮ್ಮ ಸಂಸ್ಕೃತಿ-ಪರಂಪರೆಯನ್ನು ಉಳಿಸಿ-ಬೆಳೆಸಬೇಕು ಎಂದರು.
ಪ್ರಾಚಾರ್ಯ ಶ್ರೀನಿವಾಸ ನರಗುಂದ ಅಧ್ಯಕ್ಷತೆ ವಹಿಸಿದ್ದರು. ಸ್ವಪ್ನಾ ಗೌಡರ ಪ್ರಾರ್ಥಿಸಿದರು. ಸಂಯೋಜಕ ಡಾ.ಎಚ್.ಎಸ್.ಗಿಡಗಂಟಿ ಸ್ವಾಗತಿಸಿದರು. ಕೃಷ್ಣ ಲಮಾಣಿ ನಿರೂಪಿಸಿದರು. ಕೆ.ಎಸ್.ದಾಸರ ವಂದಿಸಿದರು.
ಸಾಂಪ್ರದಾಯಿಕ ಉಡುಗೆ
ದೇಶಿ ಉಡುಗೆ ತೊಟ್ಟಿದ್ದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಗಮನ ಸೆಳೆದರು. ಕಬ್ಬು , ಜೋಳದ ತೆನೆ, ಮಾವಿನ ಎಲೆ ಹಾಗೂ ರಂಗೋಲಿಯಿಂದ ಕಾಲೇಜಿನ ಆವರಣವನ್ನು ಶೃಂಗಾರಗೊಳಿಸಲಾಗಿತ್ತು. ಚೈತ್ರಾ ಚೆಲ್ಲಾಮರದ ನೃತ್ಯದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಭವಾನಿ ಸೂರ್ಯವಂಶಿ ಹಾಗೂ ರವಿನಾ ರಾಠೋಡ ಮರಾಠಿ ಲಾವಣಿ ಸಾದರಪಡಿಸಿದರು. ನವೀನ ಪಾಟೀಲ, ದಿವ್ಯಾ ಬಿಲ್ಲಾರ, ಸುರೇಖಾ ಕಟ್ಟೆನ್ನವರ, ಚೈತ್ರಾ ಪತ್ತಾರ, ಸವಿತಾ ನಿಂಬಲಗುಂದಿ, ಎಲ್ಲವ್ವ ಕಂಬಳಿ, ರವಿ ಗೌಡರ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಭುವನೇಶ್ವರಿ ಟೊಂಗಳೆ ಮತ್ತು ನೂರಜಹಾನ ಹವಾಲ್ದಾರ ಕಾರ್ಯಕ್ರಮ ನಡೆಸಿಕೊಟ್ಟರು.