ಕೆ.ಎಂ.ದೊಡ್ಡಿ: ಜಮೀನು ವಿವಾದಗಳಿಗೆ ನ್ಯಾಯಾಲಯದಲ್ಲಿ ಹತ್ತಾರು ವರ್ಷ ಅಲೆಯುವುದನ್ನು ಬಿಟ್ಟು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಕಿವಿಮಾತು ಹೇಳಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಸಿ.ಎ.ಕೆರೆ ಹೋಬಳಿ ಮಟ್ಟದ ಪಹಣಿ ತಿದ್ದುಪಡಿ, ಖಾತಾ ಆಂದೋಲನ ಮತ್ತು ಕಂದಾಯ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೈತರು ತಿಳಿದೋ ತಿಳಿಯದೋ ನ್ಯಾಯಾಲಯದಲ್ಲಿ ವ್ಯಾಜ್ಯವಾಡುವ ಮೂಲಕ ಕಾಲಹರಣವಾಗುತ್ತಿದೆ. ಗ್ರಾಮಗಳಲ್ಲೇ ಮಾತುಕತೆ ಮೂಲಕ ಬಗೆಹರಿಸಿಕೊಂಡು ನ್ಯಾಯಾಲಯಕ್ಕೆ ಅಲೆಯುವುದನ್ನು ನಿಲ್ಲಿಸಬೇಕು ಎಂದರು.
ಉಪವಿಭಾಗಾಧಿಕಾರಿ ಎ.ಆರ್.ಸೂರಜ್ ಮಾತನಾಡಿ, ಗ್ರಾಮದ ಪ್ರತಿ ಮನೆಯಲ್ಲೂ ಕಂದಾಯ, ರೇಷನ್ ಕಾರ್ಡ್, ಆಧಾರ್ ದಾಖಲೆಗಳು ಸಮರ್ಪಕವಾಗಿರಬೇಕು ಎಂದರು.
ಸಿ.ಎ. ಕೆರೆ ಹೋಬಳಿ ವ್ಯಾಪ್ತಿಯಲ್ಲಿ 30 ಸಾವಿರಕ್ಕೂ ಅಧಿಕ ಪಹಣಿಗಳು ದೋಷಪೂರಿತವಾಗಿರುವ ಕಾರಣ ಗ್ರಾಮ ಮಟ್ಟದಲ್ಲೆ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ತಹಸೀಲ್ದಾರ್ ಎಂ.ವಿಜಯಣ್ಣ, ಉಪ ತಹಸೀಲ್ದಾರ್ ಸೋಮಶೇಖರ್, ರಾಜಸ್ವ ನಿರೀಕ್ಷಕರಾದ ಮಹೇಶ್, ರಾಜಶೇಖರ್, ಗ್ರಾಮ ಲೆಕ್ಕಾಧಿಕಾರಿಗಳಾದ ಜೆ.ರವಿ, ಆಂಜನಪ್ಪ, ನವೀನ್, ಬಿರೇಶ್, ರುದ್ರೇಶ್, ಸುರೇಶ್, ಸೌಮ್ಯಾ ಮತ್ತಿತರರಿದ್ದರು.
ಅಧಿಕಾರಿಗಳ ಶ್ರಮ: ಸಿ.ಎ.ಕೆರೆ ಹೋಬಳಿ ರೈತರರಿಗೆ ಗ್ರಾಮ ಲೆಕ್ಕಾಧಿಕಾರಿಗಳು ಸ್ವಯಂಪ್ರೇರಿತರಾಗಿ ದಾಖಲೆಗಳನ್ನು ಹುಡುಕಿ ಆರ್ಟಿಸಿಗಳನ್ನು ಒಗ್ಗೂಡಿಸಿ 335 ರೈತರಿಗೆ ಆದೇಶ (ಅಧಿಕೃತ ಜ್ಞಾಪನಾ) ಪ್ರತಿ ನೀಡಿದರು. ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಕ್ಕೆ ರೈತರು ಪ್ರಶಂಸೆ ವ್ಯಕ್ತಪಡಿಸಿದರು.
ರೈತ ಸಂಘದಿಂದ ಹಲವು ಬೇಡಿಕೆ: ಹೆಚ್ಚುವರಿಯಾಗಿ ಉಪ ತಹಸೀಲ್ದಾರ್ ಅವರನ್ನು ನೇಮಕ ಮಾಡಿ. ಭತ್ತ ಖರೀದಿ ಕೇಂದ್ರ ತೆರೆಯಬೇಕು, ಟನ್ ಕಬ್ಬಿಗೆ ಸರ್ಕಾರ ಬೆಂಬಲ ಬೆಲೆ 3 ಸಾವಿರ ಘೋಷಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಅಣ್ಣೂರು ಮಹೇಂದ್ರ, ಶೆಟ್ಟಹಳ್ಳಿ ರವಿಕುಮಾರ್, ರಮೇಶ್ ಬನ್ನಹಳ್ಳಿ, ಮಣಿಗೆರೆ ರಾಮಣ್ಣ, ಕಳ್ಳಿಮೆಳ್ಳೆದೊಡ್ಡಿ ಸಿದ್ದರಾಜು, ಕೂಳಗೆರೆ ವೆಂಕಟೇಶ್ ಮತ್ತಿತರರಿದ್ದರು.