ನವದೆಹಲಿ: ಮುಖ್ಯ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ಕೆಎಲ್ ರಾಹುಲ್ ಮಾರ್ಗದರ್ಶನದಲ್ಲೇ ಮೂರು ವರ್ಷಗಳ ಕಾಲ ತಂಡದ ಯೋಜನೆ ರೂಪಿಸಲಾಗುವುದು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ-ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ 13ನೇ ಐಪಿಎಲ್ನಲ್ಲಿ ಪಂಜಾಬ್ ತಂಡದ ಅಸ್ಥಿರ ನಿರ್ವಹಣೆ ಹಿನ್ನೆಲೆಯಲ್ಲಿ ಕೋಚ್, ನಾಯಕ ಬದಲಾವಣೆ ಕುರಿತು ಎದ್ದಿದ್ದ ಊಹಾಪೋಹಗಳಿಗೆ ಸ್ವತಃ ಫ್ರಾಂಚೈಸಿಯಿಂದಲೇ ಸ್ಪಷ್ಟನೆ ಸಿಕ್ಕಂತಾಗಿದೆ.
ಯುಎಇಯಲ್ಲಿ ನಡೆದ ಲೀಗ್ನಲ್ಲಿ ಆರಂಭಿಕ 7 ಪಂದ್ಯಗಳಲ್ಲಿ 6ರಲ್ಲಿ ಸೋತಿದ್ದ ಪಂಜಾಬ್, ಬಳಿಕ ಸತತ 5 ಜಯ ದಾಖಲಿಸಿ ಅಂತಿಮ ಹಂತದವರೆಗೂ ಪ್ಲೇಆಫ್ ಹೋರಾಟದ ರೇಸ್ನಲ್ಲಿ ಉಳಿದಿತ್ತು. ‘ಅಂಪೈರ್ ತೆಗೆದುಕೊಂಡ ಕೆಲವೊಂದು ತಪ್ಪು ನಿರ್ಣಯದಿಂದಾಗಿ ಪ್ಲೇಆಫ್ ಪ್ರವೇಶಿಸುವುದಕ್ಕೆ ಹಿನ್ನಡೆಯಾಯಿತು. ರಾಹುಲ್-ಅನಿಲ್ ಜೋಡಿ ಮೊದಲ ವರ್ಷ ನಿರೀಕ್ಷಿತ ನಿರ್ವಹಣೆ ತೋರಲಿಲ್ಲ’ ಎಂದು ಹೇಳಿದ್ದಾರೆ.ಹೊಸ ನಾಯಕ, ಹೊಸ ಕೋಚ್ ಸೇರಿದಂತೆ ತಂಡದಲ್ಲಿ ಸಾಕಷ್ಟು ಹೊಸತನ ಕೂಡಿತ್ತು. ಮಧ್ಯಮ ಕ್ರಮಾಂಕ ಹಾಗೂ ಬೌಲಿಂಗ್ ವಿಭಾಗದಲ್ಲಿ ಕೊಂಚ ಎಡವಿದೆವು. ಗ್ಲೆನ್ ಮ್ಯಾಕ್ಸ್ವೆಲ್, ಶೆಲ್ಡನ್ ಕಾಟ್ರೆಲ್ ಸೇರಿದಂತೆ ಕೆಲ ಅಂತಾರಾಷ್ಟ್ರೀಯ ಆಟಗಾರರಿಂದ ಉತ್ತಮ ನಿರ್ವಹಣೆ ಬರಲಿಲ್ಲ’ ಎಂದು ವಾಡಿಯಾ ಹೇಳಿದ್ದಾರೆ.
ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 8ರಲ್ಲಿ ಸೋತ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆಯಿತು. ತಂಡದ ಹೀನಾಯ ನಿರ್ವಹಣೆ ನಡುವೆಯೂ ನಾಯಕ ಕೆಎಲ್ ರಾಹುಲ್, 670 ರನ್ಗಳಿಸಿ ಆರೆಂಜ್ ಕ್ಯಾಪ್ ದಕ್ಕಿಸಿಕೊಂಡರು.