ನವದೆಹಲಿ: ಲೋಕಸಭೆಯಲ್ಲಿ ಕಲಾಪ ನಡೆಯುತ್ತಿರುವ ವೇಳೆ ಇಬ್ಬರು ವ್ಯಕ್ತಿಗಳು ಒಳನುಗ್ಗಿ ಭಯದ ವಾತಾವರಣ ಸೃಷ್ಟಿರುವುದು ನಿಸ್ಸಂಶಯವಾಗಿ ಭದ್ರತಾ ಲೋಪವಾಗಿದೆ. ಡಿ. 13ರಂದು ಸಂಸತ್ ಭವನದ ಮೇಲೆ ದಾಳಿ ನಡೆಯುವ ಸಾಧ್ಯತೆ ಹಾಗೂ ಬೆದರಿಕೆಗಳು ಇದ್ದರೂ ಹೆಚ್ಚಿನ ಭದ್ರತೆ, ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ವೈಫಲ್ಯ ಉಂಟಾಗಿದೆ ಎಂಬ ಪ್ರಶ್ನೆಗಳು ಈ ಸಂದರ್ಭದಲ್ಲಿ ಉದ್ಘವಿಸುತ್ತವೆ. ಅಲ್ಲದೆ, ಸಂಸತ್ತಿನ ಮೇಲೆ ದಾಳಿ ನಡೆಸುವ ಬೆದರಿಕೆಯನ್ನು ಹಗುರವಾಗಿ ಪರಿಗಣಿಸಲಾಗಿದೆ ಎಂಬ ಸಂಶಯವೂ ಉಂಟಾಗುತ್ತದೆ.
ಇಂತಹ ಪ್ರಶ್ನೆ ಉದ್ಭವಿಸಲು ಎರಡು ಪ್ರಮುಖ ಸಂಗತಿಗಳು ಕಾರಣವಾಗುತ್ತವೆ. 22 ವರ್ಷಗಳ ಹಿಂದೆ, ಅಂದರೆ, 2001ರ ಡಿಸೆಂಬರ್ 13ರಂದೇ ಭಯೋತ್ಪಾದಕರು ಸಂಸತ್ತಿನ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಹುತಾತ್ಮರಾದವರನ್ನು ಸ್ಮರಿಸಬೇಕಾದ ಡಿ. 13ರಂದೇ ಈಗ ಭದ್ರತಾಲೋಪವಾಗಿದೆ.
ಇನ್ನೊಂದು ಮಹತ್ವದ ಸಂಗತಿ ಎಂದರೆ, ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಇದೇ ಡಿಸೆಂಬರ್ 13ರಂದು ಅಥವಾ ಅದಕ್ಕೂ ಮೊದಲು ಸಂಸತ್ತಿನ ಮೇಲೆ ದಾಳಿ ಮಾಡುವ ಬೆದರಿಕೆಯುಳ್ಳ ವಿಡಿಯೋ ಬಿಡುಗಡೆ ಮಾಡಿದ್ದ.
ಸಂಸತ್ತಿನ ಮೇಲೆ ದಾಳಿ ನಡೆಸಿದ ಅಪರಾಧಿ ಅಫ್ಜಲ್ ಗುರು ಪೋಸ್ಟರ್ ಒಳಗೊಂಡಿರುವ ವಿಡಿಯೋಗೆ “ದೆಹಲಿ ಖಲಿಸ್ತಾನ್ ಆಗಿ ಬದಲಾಗುತ್ತದೆ” ಎಂದು ಅಡಿಬರಹ ನೀಡಲಾಗಿತ್ತು. “ನನ್ನನ್ನು ಕೊಲ್ಲುವ ಭಾರತೀಯ ಏಜೆನ್ಸಿಗಳ ಸಂಚು ವಿಫಲವಾಗಿದೆ. ಡಿಸೆಂಬರ್ 13 ಅಥವಾ ಅದಕ್ಕೂ ಮೊದಲು ಸಂಸತ್ತಿನ ಮೇಲೆ ದಾಳಿ ಮಾಡುವ ಮೂಲಕ ನನ್ನ ವಿರುದ್ಧದ ಸಂಚಿಗೆ ಪ್ರತಿಕ್ರಿಯಿಸುತ್ತೇನೆ” ಎಂದು ಸವಾಲು ಹಾಕಿದ್ದ.
ಸಂಸತ್ತಿನಲ್ಲಿ ಸೋಮವಾರದಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಡಿ.22ರವರೆಗೂ ಅಧಿವೇಶನ ಮುಂದುವರಿಯಲಿದೆ. ಇದರ ನಡುವೆಯೇ ಪನ್ನುನ್ ಈ ಬೆದರಿಕೆ ವಿಡಿಯೋ ಹರಿಬಿಟ್ಟಿದ್ದ.
ಹೀಗಿದ್ದರೂ ಸಂಸತ್ತಿನ ಮೇಲೆ ದಾಳಿ ನಡೆದ 22 ವರ್ಷ ತುಂಬಿದ ಸಂದರ್ಭ ಹಾಗೂ ಖಲಿಸ್ತಾನಿ ಉಗ್ರ ಪನ್ನುನ್ ಬೆದರಿಕೆಯನ್ನು ಭದ್ರತಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಲಿಲ್ಲ ಎಂಬ ಪ್ರಶ್ನೆ ಈಗ ಸಹಜವಾಗಿಯೇ ಉದ್ಭವಿಸಿದೆ.
ಯಾರು ಈ ಪನ್ನುನ್?
ಪಂಜಾಬ್ನ ಅಮೃತಸರದಲ್ಲಿ ಹುಟ್ಟಿದ ಪನ್ನುನ್, 2019ರಲ್ಲಿ ಮೊದಲ ಪ್ರಕರಣ ದಾಖಲಾದಾಗಿನಿಂದ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಕಣ್ಗಾವಲಿನಲ್ಲಿ ಇದ್ದಾನೆ. ಭಯೋತ್ಪಾದಕ ಕೃತ್ಯಗಳು ಮತ್ತು ಚಟುವಟಿಕೆಗಳನ್ನು ಸಮರ್ಥಿಸುವ ಮತ್ತು ನಿಯೋಜಿಸುವಲ್ಲಿ ಪ್ರಾಥಮಿಕ ಪಾತ್ರವನ್ನು ವಹಿಸಿದ್ದಾನೆ ಮತ್ತು ಪಂಜಾಬ್ ಮತ್ತು ಭಾರತದ ಇತರ ಭಾಗಗಳಲ್ಲಿ ಬೆದರಿಕೆ ತಂತ್ರಗಳ ಮೂಲಕ ಭಯ ಮತ್ತು ಭಯೋತ್ಪಾದನೆಯನ್ನು ಹರಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. 2021ರ ಫೆಬ್ರವರಿ 3ರಂದು ಪನ್ನುನ್ ವಿರುದ್ಧ ಎನ್ಐಎ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಆತನನ್ನು ಘೋಷಿತ ಅಪರಾಧಿ ಎಂದು ಕಳೆದ ವರ್ಷ ನವೆಂಬರ್ 29ರಂದು ಸರ್ಕಾರ ಘೋಷಣೆ ಮಾಡಿದೆ.