ಶಿಗ್ಗಾಂವಿ: ಆರ್ಥಿಕವಾಗಿ ಸದೃಢವಾಗಿರುವ ಬ್ಯಾಂಕ್ಗಳು ರೈತರ ಕೃಷಿಗೆ ಸಾಲ ನೀಡಲು ಮುಂದಾಗುತ್ತವೆ. ಈ ನಿಟ್ಟಿನಲ್ಲಿ ರೈತರ ಜೀವನಾಡಿಯಾಗಿ ಕೆಸಿಸಿ ಬ್ಯಾಂಕ್ ಕೆಲಸ ಮಾಡುತ್ತಿದೆ ಎಂದು ಬ್ಯಾಂಕ್ ನಿರ್ದೇಶಕ ಸಂಗಮೇಶ ಕಂಬಾಳಿಮಠ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕೆಸಿಸಿ ಬ್ಯಾಂಕ್ ಶಾಖೆಯಲ್ಲಿ ಹೊಸ ಸಾಲ ವಿತರಣೆ ಹಾಗೂ ಠೇವಣಿ ಸಂಗ್ರಹಣೆ ಅಭಿಯಾನದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಹೊಸ ಬೆಳಕು-2024 ಕಾರ್ಯಕ್ರಮದಡಿ ಹೊಸ ಸಾಲ ವಿತರಣೆ ಮತ್ತು ಠೇವಣಿ ಸಂಗ್ರಹಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗೆ ಕೆಸಿಸಿ ಬ್ಯಾಂಕ್ ವಿವಿಧ ಯೋಜನೆಯಡಿ ಹೊಸ ಸಾಲ ವಿತರಣೆ ಮಾಡುತ್ತಿದೆ. ಸಾಲ ಪಡೆದ ರೈತರು ಉಪಯೋಗ ಪಡೆದುಕೊಂಡು ಸಕಾಲಕ್ಕೆ ಮರುಪಾವತಿ ಮಾಡಿದಾಗ ಬ್ಯಾಂಕ್ ಆರ್ಥಿಕ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ತಾಲೂಕಿನ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಆರ್ಥಿಕ ಅಭಿವೃದ್ಧಿಯೇ ಕೆಸಿಸಿ ಬ್ಯಾಂಕ್ ಸಮಗ್ರ ಅಭಿವೃದ್ಧಿಗೆ ಶ್ರೀರಕ್ಷೆಯಾಗಿದೆ. ಕೃಷಿ ಸಾಲ ವಿತರಣೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ವ್ಯಾಪಾರಸ್ಥರಿಗೂ ಸಾಲ ವಿತರಣೆ ಗುರಿ ಹೊಂದಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ್ನ 2024ರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಸಹಕಾರಿ ಧುರೀಣರಾದ ಶಿವಾನಂದ ರಾಮಗೇರಿ, ಬಸವರಾಜ ಹೆಸರೂರ ಮಾತನಾಡಿದರು. ಪುರಸಭೆ ಸದಸ್ಯ ಸುಭಾಸ ಚವ್ಹಾಣ, ಕರೆಪ್ಪ ಕಟ್ಟಿಮನಿ, ಬ್ಯಾಂಕ್ ವ್ಯವಸ್ಥಾಪಕ ಎಸ್.ಎನ್. ಪತ್ರದ, ನಿರೀಕ್ಷಕ ಎಸ್.ಎಂ. ಕೋಟೆಣ್ಣವರ, ಎಸ್.ಬಿ. ನೀಲಗುಂದ ಇತರರಿದ್ದರು.