ಕವಿತಾಳ: ತೋರಣದಿನ್ನಿ ಸಹಕಾರಿ ಸಂಘದಿಂದ ಮಲ್ಕಾಪುರ ಗ್ರಾಮಸ್ಥರಿಗೆ ಸ್ಥಳೀಯವಾಗಿಯೇ ಪಡಿತರ ವಿತರಿಸಲಾಗುತ್ತಿದೆ.
ಮಲ್ಕಾಪುರ ಪಡಿತರ ಚೀಟಿದಾರರು ತೋರಣದಿನ್ನಿಗೆ ಬಂದು ಪಡಿತರ ತೆಗೆದುಕೊಂಡು ಹೋಗಬೇಕಿತ್ತು. ಇದರಿಂದಾಗಿ ಜನರು ದೈನಂದಿನ ಕೆಲಸ ಬಿಟ್ಟು ಪಡಿತರಕ್ಕಾಗಿ ಪರದಾಡುವಂತಾಗಿತ್ತು. ಈ ಬಗ್ಗೆ ಮಲ್ಕಾಪುರ ಗ್ರಾಮಾಭಿವೃದ್ದಿ ಸಮಿತಿ ಮತ್ತು ಪೋತ್ನಾಳದ ವಿಮುಕ್ತಿ ಚಾರಿಟಬಲ್ ಟ್ರಸ್ಟ್ ಸ್ಥಳೀಯವಾಗಿಯೇ ಪಡಿತರ ವಿತರಿಸುವಂತೆ ತೋರಣದಿನ್ನಿ ಸಹಕಾರಿ ಸಂಘವನ್ನು ಕೋರಿದ್ದವು. ಈ ಮನವಿಗೆ ಸ್ಪಂದಿಸಿದ ಸಹಕಾರಿ ಸಂಘ ಭಾನುವಾರ ಮಲ್ಕಾಪುರಕ್ಕೆ ತೆರಳಿ ಸಾರ್ವಜನಿಕರಿಗೆ ಪಡಿತರ ವಿತರಿಸಿದೆ.