ದಾವಣಗೆರೆ: ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಬದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಶಿರಾ ಉಪ ಚುನಾವಣೆ ಪ್ರಚಾರದ ವೇಳೆ ನೀಡಿರುವ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟಿಸಿದರು.
ಜಯದೇವ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಕಟೀಲ್ ವಿರುದ್ಧ ಘೋಷಣೆ ಕೂಗಿದರು. ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಸಮಾನತೆಯ ಮಾತನಾಡಿ ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸುವುದನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ಕೆಲ ಸಮುದಾಯಗಳನ್ನು ತುಳಿಯುವುದು ಎಷ್ಟರಮಟ್ಟಿಗೆ ಸರಿ? ಸಹೋದರ ಸಮುದಾಯಗಳ ನಡುವೆ ಒಡಕು ಮೂಡಿಸುವ ಕುತಂತ್ರ ಇದಾಗಿದೆ ಎಂದರು.
ಕಟೀಲ್ ಅವರು ತಮ್ಮ ಸುಳ್ಳು ಹೇಳಿಕೆಯ ಮೂಲಕ ಲಂಬಾಣಿ, ಭೋವಿ, ಕೊರಚ, ಕೊರಮ ಇನ್ನಿತರ ಜನಾಂಗಗಳಿಗೆ ಅವಮಾನ ಮಾಡಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಅಥವಾ ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಲಿಂಗರಾಜನಾಯ್ಕ ಎಚ್.ಕೆ, ಗೌರವಾಧ್ಯಕ್ಷ ಡಿ.ಎಲ್. ರಾಮಚಂದ್ರನಾಯ್ಕ, ಜಿಲ್ಲಾಧ್ಯಕ್ಷ ಶಶಿನಾಯ್ಕ ಪುಟಗನಾಳ್, ಕುಮಾರನಾಯ್ಕ, ಲೋಕೇಶ ನಾಯ್ಕ, ಮಂಜಾನಾಯ್ಕ ಇದ್ದರು.