More

    ಬಾಗಲಕೋಟೆಯ ಜಾನಪದ ಗಾಯಕನಿಗೆ ಪ್ರಧಾನಿ ಮೋದಿ ಬಹುಪರಾಕ್​! ಇಲ್ಲಿದೆ ವೆಂಕಪ್ಪ ಸುಗತೇಕರ್ ಪರಿಚಯ

    ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 110ನೇ ಮನ್​ ಕಿ ಬಾತ್​ ಸರಣಿಯಲ್ಲಿ ಬಾಗಲಕೋಟೆ ಮೂಲದ ಗೊಂದಲಿ ಪದ ಹಾಡುಗಾರನ ಗುಣಗಾನ ಮಾಡುವ ಮೂಲಕ ಎಲೆಮರೆಕಾಯಿಯಂತಿದ್ದ ಕಲಾವಿದನನ್ನು ಮುಖ್ಯವಾಹಿನಿಗೆ ತಂದಿದ್ದಾರೆ.

    ಬಾಗಲಕೋಟೆಯ ನವನನಗರದ ನಿವಾಸಿ ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗತೇಕರ್ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಭಾರತದ ಸಂಸ್ಕೃತಿ, ಗಾಯನಗಳಿಗೆ ಲಕ್ಷಾಂತರ ಜನ ಕೊಡುಗೆ ನೀಡಿದ್ದಾರೆ. ಅವರಲ್ಲಿ ಕರ್ನಾಟಕದ ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗತೇಕರ್ ಕೂಡ ಒಬ್ಬರು. ಸಾವಿರಕ್ಕೂ ಅಧಿಕ ಜನಪದ (ಗೊಂದಲಿ) ಹಾಡುಗಳನ್ನು ಹಾಡಿ ಜನಪ್ರಿಯರಾಗಿದ್ದಾರೆ. ಹಾಗೆಯೇ ಸಾವಿರಾರು ಜನರಿಗೆ ಇವರು ಒಂದು ರೂಪಾಯಿಯನ್ನೂ ಪಡೆಯದೆ ಜನಪದ ಹಾಡುಗಳನ್ನು ಹಾಡುವುದನ್ನು ಕಲಿಸಿದ್ದಾರೆ. ಇವರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಪ್ರಧಾನಿ ಮೋದಿ ಹೊಗಳಿದ‌ರು.

    ಅಂದಹಾಗೆ 83 ವರ್ಷರ ವೆಂಕಪ್ಪ ಸುಗತೇಕರ್ ಅವರು 150ಕ್ಕೂ ಹೆಚ್ಚು ಕತೆ ಹಾಗೂ ಸಾವಿರಕ್ಕೂ ಅಧಿಕ ಗೊಂದಲಿ ಹಾಡನ್ನು ಹಾಡಿದ್ದಾರೆ. ಕಳೆದ 7 ದಶಕಗಳದ ಗೊಂದಲಿ ಪದ ಸೇವೆ ಮಾಡುತ್ತಿದ್ದಾರೆ. ಗೊಂದಲಿ ಪದ ಸೇವೆಗೆ 2022ರಲ್ಲಿ ಜನಪದ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಯನ್ನು ವೆಂಕಪ್ಪ ಪಡೆದಿದ್ದಾರೆ.

    ವೆಂಕಪ್ಪ ಅವರು ಆಕಾಶವಾಣಿ, ದೂರದರ್ಶನ ಸೇರಿದಂತೆ ರಾಜ್ಯ ಪರರಾಜ್ಯದಲ್ಲೂ ಸಾವಿರಾರು ಕಾರ್ಯಕ್ರಮ ನೀಡಿದ್ದಾರೆ. ಶಾಲೆಗೆ ಹೋಗದಿದ್ದರೂ ವೆಂಕಪ್ಪ ಅವರಿಗೆ ಜಾನಪದ ಕಲೆ ಒಲಿದಿದೆ. ಗೊಂದಲಿ ಪದ ಕಲೆ ವಂಶಪಾರಂಪರ್ಯವಾಗಿ ಬಂದಿದೆ. ಮೋದಿ ಅವರು ಮನ್ ಕಿ ಬಾತ್​ನಲ್ಲಿ ತಮ್ಮ ಕಲೆ ಹಾಗೂ ತಮ್ಮನ್ನು ಉಲ್ಲೇಖಿಸಿದ್ದಕ್ಕೆ ಪರಮಾನಂದವಾಗಿದೆ ಎಂದು ವೆಂಕಪ್ಪ ಸಂತಸ ವ್ಯಕ್ತಪಡಿಸಿದರು. ಮೋದಿ ಮೆಚ್ಚುಗೆ ಎಲ್ಲ ಪ್ರಶಸ್ತಿಗಳನ್ನು ಮೀರಿದಷ್ಟು ಖುಷಿಯಾಗಿದೆ. ದೇಶದ ಆಡಳಿತ ನಡೆಸುವ ಮೋದಿ ಅವರು ನನ್ನ ಹೆಸರಿಸಿದ್ದರ ಬಗ್ಗೆ ಸಂತೋಷವಾಗಿದೆ ಎಂದಿದ್ದಾರೆ.

    ಪ್ರಧಾನಿ ಮೋದಿ ಗುಣಗಾನ ಮಾಡಿದ ಬೆನ್ನಲ್ಲೆ ವೆಂಕಪ್ಪ ಅವರ ಮನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ವೆಂಕಪ್ಪ ನಿವಾಸಕ್ಕೆ ಭೇಟಿ, ಅಭಿನಂದನೆ ಸಲ್ಲಿಸಿದ್ದಾರೆ. ವೆಂಕಪ್ಪ ಅವರಿಗೆ ಎಲ್ಲಡೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ಕುಟುಂಬದಲ್ಲಿಯೂ ಸಂಭ್ರಮ ಮನೆ ಮಾಡಿದೆ.

    ಸ್ಕೂಬಾ ಡೈವಿಂಗ್‌ ಮಾಡಿ ಪ್ರಾಚೀನ ದ್ವಾರಕಾ ನಗರದ ಅವಶೇಷ ವೀಕ್ಷಿಸಿದ ಪ್ರಧಾನಿ ಮೋದಿ

    50 ವರ್ಷದ ಬಳಿಕ ಚಂದ್ರನ ಮೇಲೆ ಇಳಿಯಿತು ಅಮೆರಿಕಾ ಬಾಹ್ಯಾಕಾಶ ನೌಕೆ..!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts