ಚಾಮರಾಜನಗರ: ಪೊಲೀಸ್ ಕಾನ್ಸ್ಟೇಬಲ್ ಓರ್ವ ತನ್ನ ಪತ್ನಿಯ ಶೀಲ ಶಂಕಿಸಿ, ಸುಮಾರು 230 ಕಿ.ಮೀ ಪ್ರಯಾಣಿಸಿ, ತವರು ಮನೆಯಲ್ಲಿದ್ದ ಆಕೆಯನ್ನು ಕೊಂದು ಹಾಕಿರುವ ಹೃದಯವಿದ್ರಾವಕ ಘಟನೆ ಹೊಸಕೋಟೆ ತಾಲೂಕಿನಲ್ಲಿ ಸೋಮವಾರ ನಡೆದಿರುವುದಾಗಿ ವರದಿಯಾಗಿದೆ.
ಕೊಲೆಯಾದ ಮಹಿಳೆಯನ್ನು ಪ್ರತಿಭಾ (24) ಎಂದು ಗುರುತಿಸಲಾಗಿದೆ. 32 ವರ್ಷದ ಆರೋಪಿ ಕಾನ್ಸ್ಟೇಬಲ್ ಕಿಶೋರ್ ಡಿ ಎಂಬಾತ ಚಾಮರಾಜನಗರದಿಂದ 230 ಕಿ.ಮೀ ದೂರದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿರುವ ಪತ್ನಿಯ ತವರು ಮನೆಗೆ ಪ್ರಯಾಣಿಸಿ, ಭೀಕರ ಹತ್ಯೆ ನಡೆಸಿದ್ದಾನೆ. ಅದಕ್ಕೂ ಮುನ್ನ ತನ್ನ ಪತ್ನಿಗೆ ಕಿಶೋರ್ 150 ಬಾರಿ ಕರೆ ಮಾಡಿದ್ದು, ಯಾವುದಕ್ಕೂ ಪ್ರತಿಭಾ ಉತ್ತರಿಸಲಿಲ್ಲ ಎಂದು ತಿಳಿದುಬಂದಿದೆ.
ಪತ್ನಿಯನ್ನು ಕೊಲ್ಲುವ ಮುಂಚೆ ಕ್ರಿಮಿನಾಶಕ ಸೇವಿಸಿದ್ದ ಕಾನ್ಸ್ಟೇಬಲ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದಂಪತಿಗೆ ಕೇವಲ 11 ದಿನಗಳ ಹಿಂದಷ್ಟೇ ಗಂಡು ಮಗು ಜನಿಸಿತ್ತು. ಕಿಶೋರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ಕಸ್ಟಡಿಗೆ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಿಶೋರ್ ಮತ್ತು ಪ್ರತಿಭಾ 2022ರ ನವೆಂಬರ್ 13ರಂದು ಮದುವೆಯಾಗಿದ್ದರು. ಒಂದು ವರ್ಷಗಳ ಕಾಲ ಸಂಸಾರ ನಡೆಸಿದರೂ, ಪ್ರತಿಭಾ ಶೀಲದ ಮೇಲೆ ಕಿಶೋರ್ಗೆ ಸಂಶಯವಿತ್ತು. ಹೀಗಾಗಿ ಆಗಾಗ ಆಕೆಯ ಮೆಸೇಜ್ ಮತ್ತು ಕಾಲ್ ರೆಕಾರ್ಡ್ಸ್ಗಳನ್ನು ಪರಿಶೀಲಿಸುತ್ತಿದ್ದ. ಆಕೆಯೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದ ಪ್ರತಿಯೊಬ್ಬ ವ್ಯಕ್ತಿಯನ್ನು ವಿಚಾರಿಸುತ್ತಿದ್ದ. ತನ್ನ ಕಾಲೇಜಿನ ಕೆಲ ಗೆಳೆಯರೊಂದಿಗೆ ಪ್ರತಿಭಾ ಆಪ್ತತೆ ಹೊಂದಿದ್ದಳು ಎಂದು ಹೇಳಲಾಗಿದೆ.
ಭಾನುವಾರ ಸಂಜೆ ಕಿಶೋರ್, ಪ್ರತಿಭಾಗೆ ಕರೆ ಮಾಡಿ, ಆಕೆಯನ್ನು ಮನಸೋ ಇಚ್ಛೆ ನಿಂದಿಸಿದ್ದಾನೆ. ಈ ವೇಳೆ ಪ್ರತಿಭಾ ಅಳುತ್ತಿದ್ದಂತೆ ಆಕೆಯ ತಾಯಿ ಮಧ್ಯಪ್ರವೇಶಿಸಿ ಕರೆಯನ್ನು ಕಡಿತಗೊಳಿಸಿದರು. ನೀನು ಈ ರೀತಿ ಅತ್ತರೆ ಈಗ ತಾನೆ ಜನಿಸಿರುವ ಮಗುವಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ ಎಂದು ಪ್ರತಿಭಾ ತಾಯಿ ಸಮಾಧಾನ ಮಾಡಿದ್ದಾರೆ. ಅಲ್ಲದೆ, ಕಿಶೋರ್ ಕರೆ ಮಾಡಿದರೆ ಉತ್ತರಿಸಬೇಡ ಎಂದು ಸಲಹೆ ನೀಡಿದ್ದಾರೆ. ಸೋಮವಾರ ಬೆಳಗ್ಗೆ ಪ್ರತಿಭಾ ತನ್ನ ಮೊಬೈಲ್ ನೋಡಿದಾಗ ಕಿಶೋರ್ 150 ಬಾರಿ ಕರೆ ಮಾಡಿರುವುದು ಆಕೆ ಗೊತ್ತಾಗಿ, ಪಾಲಕರಿಗೆ ತಿಳಿಸಿದ್ದಾಳೆ.
ಇದರ ನಡುವೆ ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಪ್ರತಿಭಾ ಮನೆಯನ್ನು ತಲುಪಿದ ಕಿಶೋರ್, ಮೊದಲು ಕ್ರಿಮಿನಾಶಕವನ್ನು ಸೇವಿಸಿ, ಬಳಿಕ ಪ್ರತಿಭಾ ಮತ್ತು ಮಗು ಇದ್ದ ಕೋಣೆಯ ಬಾಗಿಲನ್ನು ಹಾಕಿಕೊಂಡಿದ್ದಾನೆ. ಇದಾದ ನಂತರ ದುಪ್ಪಟ್ಟದಿಂದ ಪ್ರತಿಭಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೆಲ ಕಾಲ ರೂಮಿನಿಂದ ಯಾರೂ ಬರದಿದ್ದನ್ನು ನೋಡಿ, ಅನುಮಾನ ಬಂದು ಪ್ರತಿಭಾ ತಾಯಿ ಬಾಗಿಲನ್ನು ಬಡಿದಿದ್ದಾರೆ. ಆದರೆ, ಹೊರಗಡೆಯಿಂದ ಯಾರಿಂದಲೂ ಪ್ರತಿಕ್ರಿಯೆ ಬಾರದಿದ್ದಾಗ ಸುಮಾರು 15 ನಿಮಿಷಗಳ ಬಳಿಕ ಕಿಶೋರ್ ಕೂಗಿಕೊಂಡು ಕೋಣೆಯಿಂದ ಹೊರಗಡೆ ಬಂದಿದ್ದಾನೆ. ಕೋಣೆಯಿಂದ ಬರುವಾಗ “ಕೊಂದು ಬಿಟ್ಟೆ ಅವಳನ್ನ ಕೊಂದು ಬಿಟ್ಟೆ” ಎಂದು ಕೂಗುತ್ತಾ ಅಲ್ಲಿಂದ ಪರಾರಿಯಾದನು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
‘ತಪ್ಪಾಗಿ ಅರ್ಥೈಸಬೇಡಿ, ಸಿಎಂ ಮಾತನಾಡಿದ್ದು ಲೈಂಗಿಕ ಶಿಕ್ಷಣದ ಬಗ್ಗೆ’: ಸಮರ್ಥಿಸಿಕೊಂಡ ತೇಜಸ್ವಿ ಯಾದವ್