ಕಾರಟಗಿ: ನಿರಂತರ ಮಳೆಯಿಂದ ನಷ್ಟವಾದ ಬೆಳೆಗಳ ಸರ್ವೇ ಕಾರ್ಯವನ್ನು ಎರಡು ದಿನದೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರಡ್ಡಿ ತಾಕೀತು ಮಾಡಿದರು.
ಬೆಳೆ ಹಾನಿ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು. ಮಳೆ ಇನ್ನೂ ಮುಂದುವರಿಯುವ ಸಾಧ್ಯತೆಗಳಿವೆ. ಅಧಿಕಾರಿಗಳು ಜಾಗ್ರತೆಯಿಂದ ಕರ್ತವ್ಯ ನಿರ್ವಹಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಕಾಳಜಿಯಿಂದ ಸರ್ವೇ ನಡೆಸಬೇಕು. ಸರ್ವೇ ವೇಳೆ ನಿರ್ಲಕ್ಷ್ಯವಹಿಸದೆ ಕಡ್ಡಾವಾಗಿ ಜಿಪಿಎಸ್, ಆಧಾರ್ ಲಿಂಕ್ ಮಾಡಬೇಕು ಎಂದರು. ಹಗೇದಾಳ, ಚಳ್ಳೂರು, ಪನ್ನಾಪೂರ, ಕಾರಟಗಿ, ಯರಡೋಣಾ, ಮರ್ಲಾನಹಳ್ಳಿ, ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ ಹಾಗೂ ಸಿದ್ದಾಪುರ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿದರು.