ಉಡುಪಿ: ಕೀರ್ತಿಶೇಷ ಡಾ.ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬದ ಅಂಗವಾಗಿ ಕಾರ್ಕಡ ಗೆಳೆಯರ ಬಳಗ ನೀಡುವ ಗೆಳೆಯರ ಬಳಗ ಕಾರಂತ ಪುರಸ್ಕಾರಕ್ಕೆ ಕಾರಂತರ ಒಡನಾಡಿ, ಯಕ್ಷಗುರು, ಸಾಹಿತಿ, ಬನ್ನಂಜೆ ಸಂಜೀವ ಸುವರ್ಣ ಭಾಜನರಾಗಿದ್ದಾರೆ.
ಬನ್ನಂಜೆಯವರಾದ ಸಂಜೀವ ಸುವರ್ಣ ದೇಶ, ವಿದೇಶಗಳಲ್ಲಿ ಐದು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಿದವರು. ಭರತನಾಟ್ಯ, ಕೂಡಿಯಾಟ್ಟಂ, ಕಥಕ್, ನಾಟಕ ಕಲೆಯಲ್ಲೂ ಪರಿಣತಿ ಪಡೆದವರು. ಡಾ.ಕೋಟ ಶಿವರಾಮ ಕಾರಂತರ ನಂತರ ನಿರ್ದೇಶನದಲ್ಲಿ ಯಕ್ಷಗಾನ ಬ್ಯಾಲೆಯನ್ನು ದೇಶ, ವಿದೇಶಕ್ಕೆ ಕೊಂಡೊಯ್ದು ಪ್ರದರ್ಶನ ನೀಡಿದ ಖ್ಯಾತಿ ಅವರದು. ಈ ಪುರಸ್ಕಾರ ಗೌರವಧನ ಹಾಗೂ ಸನ್ಮಾನ ಪತ್ರವನ್ನು ಒಳಗೊಂಡಿದೆ.
ಗೆಳೆಯರ ಬಳಗ ಕಾರಂತ ಪುರಸ್ಕಾರ ಪ್ರದಾನ ಅ.15ರಂದು ಸಾಯಂಕಾಲ ಕಾರ್ಕಡ ಗಿರಿಜಾ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಪ್ರದಾನ ಮಾಡುವರು ಎಂದು ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ತಿಳಿಸಿದ್ದಾರೆ.