ಲಖನೌ: ನನ್ನ ಹೆಚ್ಚಿನ ನಿರ್ಧಾರಗಳು ಫಲಿಸಿದವು. ಇದೊಂದು ಉತ್ತಮ ದಿನವಾಗಿತ್ತು ಎಂದು ಲಖನೌ ಸೂಪರ್ಜೈಂಟ್ಸ್ ನಾಯಕ ಕೆಎಲ್ ರಾಹುಲ್, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ 8 ವಿಕೆಟ್ಗಳಿಂದ ಗೆದ್ದ ಬಳಿಕ ಸಂಭ್ರಮಿಸಿದರು.
“ನಾವು 160 ರನ್ಗಳಿಗೆ ನಿಯಂತ್ರಿಸಲು ಬಯಸಿದ್ದೆವು. ಆದರೆ ಕೊನೆಯಲ್ಲಿ ಎಂಎಸ್ ಧೋನಿ ಕಣಕ್ಕಿಳಿದಾಗ ನಮ್ಮ ಬೌಲರ್ಗಳು ಸ್ವಲ್ಪ ಹೆದರಿದಂತೆ ಅನಿಸಿತು. ನಮ್ಮ ತವರಿನ ಪ್ರೇಕ್ಷಕರೂ ಅವರ ಪರವಾಗಿ ನಿಂತಿದ್ದರು. ಉತ್ತಮವಾಗಿ ಬ್ಯಾಟಿಂಗ್ ಮಾಡಿದರೆ ನಮಗೆ ಚೇಸಿಂಗ್ ಮಾಡುವ ವಿಶ್ವಾಸವಿತ್ತು’ ಎಂದು ಕೆಎಲ್ ರಾಹುಲ್ ಹೇಳಿದರು.
ಸಿಎಸ್ಕೆ ತಂಡದ 177 ರನ್ ಸವಾಲಿಗೆ ಪ್ರತಿಯಾಗಿ ಕೆಎಲ್ ರಾಹುಲ್ (82) ಜತೆಗೆ ಕ್ವಿಂಟನ್ ಡಿಕಾಕ್ (54) ಮೊದಲ ವಿಕೆಟ್ಗೆ 134 ರನ್ ಪೇರಿಸುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ನಂತರ ನಿಕೋಲಸ್ ಪೂರನ್ (23) ಕೂಡ ರಾಹುಲ್ಗೆ ಉತ್ತಮ ಬೆಂಬಲ ಒದಗಿಸಿದರು. ಆದರೆ ಗೆಲುವಿನಿಂದ 16 ರನ್ ದೂರವಿದ್ದಾಗ ರಾಹುಲ್ ಔಟಾದರು. ಅಂತಿಮವಾಗಿ ಲಖನೌ 19 ಓವರ್ಗಳಲ್ಲಿ 2 ವಿಕೆಟ್ಗೆ 180 ರನ್ ಪೇರಿಸಿ ಜಯಿಸಿತು. ಸಿಎಸ್ಕೆ ಬೌಲರ್ಗಳು ಮತ್ತೊಮ್ಮೆ ತವರಿನಿಂದ ಹೊರಗೆ ನೀರಸ ಬೌಲಿಂಗ್ ಪ್ರದರ್ಶಿಸಿದರು. ಉಭಯ ತಂಡಗಳು ಮೂರೇ ದಿನಗಳ ಅಂತರದಲ್ಲಿ ಮಂಗಳವಾರ ಚೆಪಾಕ್ನಲ್ಲಿ ಮತ್ತೆ ಮುಖಾಮುಖಿ ಆಗಲಿವೆ.
ನಮ್ಮ ಇನಿಂಗ್ಸ್ ಉತ್ತಮ ಮುಕ್ತಾಯ ಕಂಡಿತು. ಆದರೆ ಪವರ್ಪ್ಲೇ ನಂತರದಲ್ಲಿ 14-15ನೇ ಓವರ್ ತನಕ ನಿರೀತ ಪ್ರಮಾಣದಲ್ಲಿ ರನ್ ಬರಲಿಲ್ಲ. ನಿರಂತರವಾಗಿ ವಿಕೆಟ್ ಕೂಡ ಉರುಳಿತು. ಇದರಿಂದ 10-15 ರನ್ ಕೊರತೆ ಅನುಭವಿಸಿದೆವು ಎಂದು ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಹೇಳಿದರು.
ಕೆಎಲ್ ರಾಹುಲ್ ಸಿಎಸ್ಕೆ ವಿರುದ್ಧ 3 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ 4ನೇ ಆಟಗಾರ ಎನಿಸಿದರು. ರೋಹಿತ್ ಶರ್ಮ, ಡೇವಿಡ್ ವಾರ್ನರ್, ಶಿಖರ್ ಧವನ್ ಮೊದಲ ಮೂವರು. ಕೈರಾನ್ ಪೊಲ್ಲಾರ್ಡ್ 4 ಬಾರಿ ಗಳಿಸಿರುವುದು ಗರಿಷ್ಠ.
ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದ ಸನ್ರೈಸರ್ಸ್ಗೆ ಸತತ 4ನೇ ಜಯ: ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಹೈದರಾಬಾದ್