ಕಿರುತೆರೆ ನಟ ಸುಶೀಲ್ ಗೌಡ (30) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯ ತಾಲೂಕಿನ ಇಂಡವಾಳ ಗ್ರಾಮದ ಸ್ನೇಹಿತನ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಸಾವಿಗೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ.
ಮಂಡ್ಯದ ವಿವಿ ಬಡಾವಣೆ ನಿವಾಸಿಯಾಗಿರುವ ಸುಶೀಲ್, ‘ಅಂತಃಪುರ’ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದರು. ಇದೀಗ ಅವರ ಸಾವಿಗೆ ಧಾರಾವಾಹಿ ಬಳಗ ಕಂಬನಿ ಮಿಡಿದಿದೆ. ಜತೆಗೆ ಕಮರೊಟ್ಟು ಚೆಕ್ಪೋಸ್ಟ್ ಸಿನಿಮಾದಲ್ಲಿಯೂ ನಟಿಸಿದ್ದರು.
ಫಿಟ್ನೆಸ್ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸುಶೀಲ್, ಕಿರುತೆರೆ ಜತೆಗೆ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕೆಂಬ ಕನಸು ಹೊತ್ತಿದ್ದರು. ಅದರಂತೆ, ದುನಿಯಾ ವಿಜಯ್ ನಾಯಕತ್ವ ಮತ್ತು ನಿರ್ದೇಶನದ ‘ಸಲಗ’ ಚಿತ್ರದಲ್ಲಿಯೂ ಪೊಲೀಸ್ ಪಾತ್ರ ನಿಭಾಯಿಸಿದ್ದರು.
ಸದ್ಯ ಸುಶೀಲ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಟ ದುನಿಯಾ ವಿಜಯ್ ಸಹ ಅಗಲಿದ ನಟನಿಗೆ ಕಂಬನಿ ಮಿಡಿದಿದ್ದಾರೆ. ಫೇಸ್ಬುಕ್ನಲ್ಲಿ ಆತನ ಬಗ್ಗೆ ಸುದೀರ್ಘವಾದ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ.