ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕಥಕ್ ಮತ್ತು ಯಕ್ಷಗಾನ ಕಲಿತಿರುವ ಬೆಂಗಳೂರು ಮೂಲದ ಹುಡುಗಿ ಕೃತಿ ಭಟ್, ಸದ್ಯ ಸ್ಯಾಂಡಲ್ವುಡ್ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ “ಅಮರ ಪ್ರೇಮಿ ಅರುಣ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಅವರು ತೆಲುಗಿನಲ್ಲೂ ಅಭಿನಯಿಸಿದ್ದಾರೆ. ಇದುವರೆಗಿನ ಜರ್ನಿಯ ಬಗ್ಗೆ ಕೃತಿ, “ಬಾಲ್ಯದಿಂದಲೂ ನನಗೆ ಕಲೆಯ ಬಗ್ಗೆ ಆಸಕ್ತಿ. ಹೀಗಾಗಿಯೇ ಕಥಕ್, ಯಕ್ಷಗಾನ ಕಲಿತಿದ್ದೇನೆ. 15 ವರ್ಷದವಳಾಗಿದ್ದಾಗಲೇ ಬ್ರ್ಯಾಂಡ್ಗಳಿಗೆ ಮಾಡೆಲಿಂಗ್ ಮಾಡುತ್ತಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಟಿಯಾಗುವ ಆಸೆಯಿಂದ ಕೆಲ ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದೆ. ಆಗ “ಅಮರ ಪ್ರೇಮಿ ಅರುಣ್’ ಸಿನಿಮಾದ ಆಡಿಷನ್ ನಡೆಯುತ್ತಿರುವ ಬಗ್ಗೆ ಗೊತ್ತಾಗಿ, ಆಡಿಷನ್ ಕೊಟ್ಟು ಚಿತ್ರಕ್ಕೆ ಆಯ್ಕೆಯಾದೆ’ ಎಂದು ಹೇಳಿಕೊಳ್ಳುತ್ತಾರೆ.
ಟಾಲಿವುಡ್ಗೆ ಪದಾರ್ಪಣೆ
“ಅಮರ ಪ್ರೇಮಿ ಅರುಣ್’ ಚಿತ್ರದ ಬಳಿಕ ಟಾಲಿವುಡ್ಗೆ ಎಂಟ್ರಿ ಕೊಟ್ಟಿರುವ ಕೃತಿ ಭಟ್, ನಿರ್ದೇಶಕ ರಾಮ್ಗೋಪಾಲ್ ವರ್ಮಾ ಬಳಿ ಸಹ&ನಿರ್ದೇಶಕನಾಗಿ ಕೆಲಸ ಮಾಡಿರುವ ಅಂಜನಿದಾಸ್ ಆ್ಯಕ್ಷನ್&ಕಟ್ ಹೇಳಿರುವ “ಇಚ್ಚಟ ಲವ್ ಅಮ್ಮಬಡನು ಕೊನ್ನಬಡನು’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಅದರ ನಡುವೆಯೇ ಕಳೆದ ವರ್ಷ ಬಿಕಾಂ ಪದವಿ ಪೂರೈಸಿರುವ ಅವರು ಸದ್ಯ ಆನ್ಲೈನ್ನಲ್ಲಿ ಎಂಬಿಎ ಓದುತ್ತಿದ್ದು, ಕಥಕ್ ಮತ್ತು ಯಕ್ಷಗಾನ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ. “ನಾನು ಯಾವುದೇ ಆ್ಯಕ್ಟಿಂಗ್ ಸ್ಕೂಲಿಗೆ ಹೋಗಿಲ್ಲ. ಯಕ್ಷಗಾನ ಕಲಿತಿದ್ದ ಕಾರಣ, ನನಗೆ ನಟನೆ ಕಷ್ಟವೆನಿಸಲಿಲ್ಲ. ಹೀಗಾಗಿ ಸಿನಿಮಾಗಳು ಇಲ್ಲದಿದ್ದರೂ ಡಾನ್ಸ್ ಪಾರ್ಮೆನ್ಸ್ ಮುಂದುವರಿಸುತ್ತೇನೆ’ ಎಂದು ಹೇಳಿಕೊಳ್ಳುತ್ತಾರೆ.
ನಟಿಯಾಗಬೇಕು, ನಾಯಕಿಯಲ್ಲ
ಕನ್ನಡ ಮತ್ತು ತೆಲುಗಿನಲ್ಲಿ ನಾಯಕಿಯಾಗಿ ನಟಿಸಿದ್ದರೂ, ಅದಕ್ಕಿಂತ ಹೆಚ್ಚಾಗಿ ಒಬ್ಬ ನಟಿಯಾಗಿ ಗುರುತಿಸಿಕೊಳ್ಳುವ ಆಸೆ ಕೃತಿ ಅವರದು. “ಕಥೆಗಳು ಬರುತ್ತಿವೆ. ಆದರೆ, ನನಗೆ ನಟಿಯಾಗಿ ಬೆಳೆಯಲು ಸಹಾಯವಾಗುವ ಕಥೆ ಸಿಗುತ್ತಿಲ್ಲ. ಇದೇ ರೀತಿಯ ಪಾತ್ರ ಬೇಕು ಅಂತ ಕೇಳುವ ಮಟ್ಟಕ್ಕೆ ನಾನಿನ್ನೂ ಬೆಳೆದಿಲ್ಲ. ಆದರೆ, ಪಾತ್ರಕ್ಕೆ ಸ್ವಲ್ಪವಾದರೂ ಪ್ರಾಮುಖ್ಯ ಇರಬೇಕು. ಸಣ್ಣ ಪಾತ್ರವಾದರೂ ಜನರ ನೆನಪಿನಲ್ಲಿ ಉಳಿಯುವಂತಹ ಪಾತ್ರವಿದ್ದರೆ ಚಂದ’ ಎನ್ನುತ್ತಾರೆ.