ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವನ್ನು ಮುಂಬೈ ಪೊಲೀಸರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದು, ಇಲ್ಲಿಯವರೆಗೂ 28 ಜನರನ್ನು ವಿಚಾರಣೆ ನಡೆಸಿದ್ದಾರೆ.
ಈ ಪೈಕಿ ಸುಶಾಂತ್ ಸಿಂಗ್ ಕುಟುಂಬದವರು, ಆಪ್ತರು, ಮನೆಗೆಲಸದವರು, ಚಿತ್ರರಂಗದವರು ಸಹ ಸೇರಿದ್ದಾರೆ. ಇತ್ತೀಚೆಗಷ್ಟೇ, ನಿರ್ದೇಶಕ ಮತ್ತು ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರಿಗೂ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಕಳಿಸಿದ್ದರು ಎಂಬ ದೊಡ್ಡ ಸುದ್ದಿಯಾಗಿತ್ತು. ಈಗ ನಟಿ ಕಂಗನಾ ರಣಾವತ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸ್ ಸಮನ್ಸ್ ಕಳಿಸಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಮ್ಮನಿಗೆ ಹಾರ್ಟ್ ಆಪರೇಷನ್ ಮಾಡಿಸಿದ್ದು ಸಲ್ಮಾನ್ … ಥ್ಯಾಂಕ್ಸ್ ಹೇಳಿದ ಸರೋಜ್ ಪುತ್ರಿ
ಇಷ್ಟಕ್ಕೂ ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೂ, ಕಂಗನಾ ರಣಾವತ್ ಅವರಿಗೂ ಸಂಬಂಧವೇನು ಎಂಬ ಪ್ರಶ್ನೆ ಸಹಜವೇ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ, ಅವರಿಗೆ ದೊಡ್ಡ ಮಟ್ಟದಲ್ಲಿ ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದು ಅದೇ ಕಂಗನಾ. ಬಾಲಿವುಡ್ನಲ್ಲಿ ಪ್ರಚಲಿತದಲ್ಲಿರುವ ಸ್ವಜನಪಕ್ಷಪಾತದ ಕುರಿತಾಗಿ ಪ್ರಸ್ತಾಪಿಸಿದ್ದ ಕಂಗನಾ, ಅದೇ ನೆಪೋಟಿಸಂನಿಂದ ಸುಶಾಂತ್ ಆತ್ಮಹತ್ಯೆಯ ದಾರಿ ತುಳಿಯಬೇಕಾಯಿತು ಎಂದು ಹೇಳಿದ್ದರು.
ಅವರ ಹೇಳಿಕೆಯ ನಂತರ ಬಾಲಿವುಡ್ನಲ್ಲಿ ದೊಡ್ಡ ಕೋಲಾಹಲವೇ ಉಂಟಾಗಿದ್ದು, ಸ್ವಜನಪಕ್ಷಪಾತದ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಅಸಹನೆ ವ್ಯಕ್ತವಾಗಿತ್ತು. ಅದರಲ್ಲೂ ಸ್ವಜನಪಕ್ಷಪಾತವನ್ನು ಪೋಷಿಸುತ್ತಿದ್ದಾರೆ ಎಂದು ಹೇಳಲಾಗುವ ಕರಣ್ ಜೋಹಾರ್ ವಿರುದ್ಧ ವ್ಯಾಪಕವಾದ ಟೀಕೆಗಳು ವ್ಯಕ್ತವಾಗಿದ್ದವು. ಇನ್ನು ಅವರು ಚಿತ್ರರಂಗಕ್ಕೆ ಪರಿಚಯಿಸಿದ ಆಲಿಯಾ ಭಟ್, ವರುಣ್ ಧವನ್ ಮುಂತಾದವರ ಬಗ್ಗೆಯೂ ಟೀಕೆಗಳು ಕೇಳಿ ಬಂದವು.
ಇದನ್ನೂ ಓದಿ: ಬಾಲಿವುಡ್ನಲ್ಲಿ ಸಿನಿಮಾ ಆಗಲಿದೆ ಗಲ್ವಾನ್ ದಾಳಿ!
ಈ ಸ್ವಜನಪಕ್ಷಪಾತದ ವಿಷಯವಾಗಿಯೇ ಕಂಗನಾ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂಬ ಸುದ್ದಿಯೊಂದು ಇದೀಗ ಕೇಳಿಬರುತ್ತಿದೆ. ಈ ಸುದ್ದಿ ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ, ಇದುವರೆಗೂ ಕಂಗನಾಗೆ ಯಾವುದೇ ರೀತಿಯ ಸಮನ್ಸ್ ಅಂತೂ ಹೋಗಿಲ್ಲ.
ಒಂದು ಪಕ್ಷ ಸುಶಾಂತ್ ಸಾವಿನ ವಿಷಯದಲ್ಲಿ ವಿಚಾರಣೆಗೆ ಪೊಲೀಸರು ಕರೆದರೆ, ತಾವು ವಿಚಾರಣೆಗೆ ಬರಲು ಸಿದ್ಧ ಎಂದು ಕಂಗನಾ ರಣಾವತ್ ಸಹ ಹೇಳಿಕೊಂಡಿದ್ದಾರೆ. ಈ ಕುರಿತಾಗಿ ಅವರ ಹೇಳಿಕೆಯನ್ನು ಅವರ ಮಾಧ್ಯಮ ತಂಡವು ಬಿಡುಗಡೆ ಮಾಡಿದೆ.