ಅರಸೀಕೆರೆ: ಶಾಲೆ ಅಭಿವೃದ್ಧಿ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮನೆಮನೆಗೆ ಅಕ್ಷರದ ಜೋಳಿಗೆ ಹಿಡಿದುಕೊಂಡು ಹೋಗಿ ಹಣ ಸಂಗ್ರಹಿಸೋಣ ಎಂದು ತಾಲೂಕು ಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯ ಹೇಳಿದರು.
ಕಂಚಿಕೆರೆ ಗ್ರಾಮದ ಬಸ್ ಸ್ಟ್ಯಾಂಡ್ ಸರ್ಕಲ್ನಲ್ಲಿ ಶುಕ್ರವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯೋಜಿಸಿದ್ದ ಅಕ್ಷರ ಜೋಳಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಳಗಂಚಿಕೇರಿ ಗ್ರಾಮದಲ್ಲಿ 1.48 ಲಕ್ಷ ರೂ., ಹರಪನಹಳ್ಳಿಯ ಕುರಬಗೇರಿಯಲ್ಲಿ 72 ಸಾವಿರ ರೂ., ರಾಗಿ ಮಸಲವಾಡದಲ್ಲಿ 72.300 ರೂ., ಕಡಬಗೇರಿಯಲ್ಲಿ 2.10 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ. ಇಡೀ ಶಿಕ್ಷಣ ಇಲಾಖೆ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿದೆ ಎಂದು ಮಾಹಿತಿ ನೀಡಿದರು.
ಬಿಆರ್ಪಿ ಮಂಜುನಾಥ್ ಮಾತನಾಡಿ, ಸರ್ಕಾರಿ ಶಾಲೆಗಳ ಕ್ಷೇಮಾಭಿವೃದ್ಧಿ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಇಂಥ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ. ಸರ್ಕಾರ ಸವಲತ್ತು ಕೊಟ್ಟಿದೆ. ನೂತನ ತಂತ್ರಜ್ಞಾನ ಬಂದಿರುವುದರಿಂದ ಮಕ್ಕಳಿಗೆ ತಂತ್ರಜ್ಞಾನದ ವಿದ್ಯೆ ಅವಶ್ಯ. ಆದ್ದರಿಂದ ಕ್ರೋಡೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಶಿಕ್ಷಕರ ಸಂಘದ ನಿರ್ದೇಶಕ ಕಥೆಗಾರ ಮಂಜಣ್ಣ ಮಾತನಾಡಿ, ನಾನು ಇದೇ ಶಾಲೆಯಲ್ಲಿ ಓದಿ ಶಿಕ್ಷಕನಾಗಿದ್ದೇನೆ. ಸರ್ಕಾರಿ ಶಾಲೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಹೇಳಿದರು.