| ಎಲ್.ಜಿ. ಜಯರಾಮನಾಯಕ್ ಹಾರೋಹಳ್ಳಿ
ಸಿನಿಮಾ ಸ್ಟಾರ್ಗಳಿಗೆ ಅಭಿಮಾನಿಗಳ ಕೊರತೆ ಇಲ್ಲ. ಅಭಿಮಾನಿಗಳ ಪ್ರೀತಿ ಯಾವ ಹಂತದಲ್ಲಿ ಇರುತ್ತದೆ ಎಂದರೆ ನೆಚ್ಚಿನ ನಟನ ಗಮನ ಸೆಳೆಯಲು ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಇಂತಹುದೇ ಮನಸ್ಥಿತಿಯ ಅಂಗವಿಕಲ ತನ್ನ ದೇಹದ ಮೇಲೆಲ್ಲಾ ಹಚ್ಚೆಗಳನ್ನು ಹಾಕಿಸಿಕೊಳ್ಳುವ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾನೆ. ಅಂದಹಾಗೆ ಆ ಅಭಿಮಾನಿ ಇರುವುದು ಕನಕಪುರ ತಾಲೂಕಿನ ಮರಳೇ ಗ್ರಾಮದಲ್ಲಿ.
ಮರಳೆ ಗ್ರಾಮದ ರತ್ನಮ್ಮ – ಪುಟ್ಟಸ್ವಾಮಿ ದಂಪತಿ ಮಗನಾದ ಬಸವರಾಜು ಹುಟ್ಟು ಅಂಗವಿಕಲನಾಗಿದ್ದು ದರ್ಶನ್ ಎಂದರೆ ಇವನಿಗೆ ಪಂಚ ಪ್ರಾಣ. ತನ್ನ ಹೆಸರಿನ ಜೊತೆಗೆ ದರ್ಶನ್ ಅಭಿನಯದ ಗಜ ಎನ್ನುವ ಹೆಸರನ್ನೂ ಸೇರಿಸಿಕೊಂಡಿದ್ದಾನೆ. ಸುತ್ತಮುತ್ತಲ ಭಾಗದಲ್ಲಿ ಗಜ ಎಂದರೇ ಬಸವರಾಜು ಎನ್ನುವಷ್ಟು ಹೆಸರು ಮಾಡಿದ್ದಾನೆ. ಇದಿಷ್ಟೇ ಅಲ್ಲದೆ, ಎದೆಯ ಮೇಲೆ, ಕೈಗಳ ಮೇಲೆ ದರ್ಶನ್ ಅಭಿನಯದ ಸಿನಿಮಾಗಳ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾನೆ.
ಮನೆಯ ತುಂಬೆಲ್ಲಾ ದರ್ಶನ್ ಪೋಸ್ಟರ್ಗಳು, ಫೋಟೋಗಳೇ ಅಲಂಕರಿಸಿವೆ. ಜತೆಗೆ ಗ್ರಾಮದ ನೀರಿನ ಟ್ಯಾಂಕ್ ಮೇಲೂ ದರ್ಶನ್ ಸಿನಿಮಾಗಳ ಹೆಸರುಗಳನ್ನು ಬರೆದು ಅಭಿಮಾನವನ್ನು ಪ್ರದರ್ಶಿಸಿದ್ದಾನೆ. ಆತನ ತ್ರಿಚಕ್ರ ವಾಹನದ ಮೇಲೆ ಕೂಡ ದರ್ಶನ್ ಫಿಲಂಗಳ ಹೆಸರುಗಳು ಅನಾವರಣಗೊಂಡಿವೆ.
ತನ್ನ ಜೀವನ ನಿರ್ವಹಣೆ ಕಷ್ಟವಾದರೂ ದರ್ಶನ್ ಬಗೆಗಿನ ಅಭಿಮಾನವನ್ನು ಹೆಚ್ಚಿಸಿಕೊಂಡೇ ಬದುಕುತ್ತಿರುವ ಗಜ ಅಲಿಯಾಸ್ ಬಸವರಾಜು, ದರ್ಶನ್ ಹುಟ್ಟುಹಬ್ಬದಂದು ಗ್ರಾಮದ ಜನರಿಗೆ ಅನ್ನ ಸಂತರ್ಪಣೆ ಮಾಡುವುದನ್ನು ಮರೆಯುವುದಿಲ್ಲ. ಕಳೆದ 13 ವರ್ಷಗಳಿಂದ ತನ್ನೂರಿನಲ್ಲಿ ದೊಡ್ಡ ಬ್ಯಾನರ್ ಕಟ್ಟಿಸುವ ಗಜ, ಕೇಕ್ ಕತ್ತರಿಸಿ, ಅನ್ನಸಂತರ್ಪಣೆ ಮಾಡುತ್ತಿದ್ದಾನೆ.
ಒಮ್ಮೆ ದರ್ಶನ್ ಹುಟ್ಟುಹಬ್ಬದ ದಿನದಂದೇ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು, ಅಂದು ಶುಭಾಶಯ ಕೋರಿದ್ದೆ. ಅಂದು ಏನಾದರೂ ನೆರವು ಬೇಕಾ ಎಂದು ಕೇಳಿ ಚೆಕ್ ಸಹ ನೀಡಿದರೂ, ಅದನ್ನು ಪಡೆದಿರಲಿಲ್ಲ ಎನ್ನುವ ಗಜ, ಈಗ ತನ್ನ ನೆಚ್ಚಿನ ನಟನನ್ನು ನೋಡಲೇಬೇಕು ಎಂದು ಹಂಬಲಿಸುತ್ತಿದ್ದಾನೆ, ಜತೆಗೆ ಬದುಕು ಕಷ್ಟವಾಗಿದ್ದು ನೆರವಿನ ನಿರೀಕ್ಷೆಯಲ್ಲೂ ಇದ್ದಾನೆ.
ದರ್ಶನ್ ಎಂದರೆ ಪಂಚಪ್ರಾಣ, ಅವರನ್ನು ಮತ್ತೊಮ್ಮೆ ನೋಡಬೇಕು ಎನಿಸುತ್ತಿದೆ. ಈಗ ಬೆಂಗಳೂರಿಗೆ ಹೋಗಲು ಸಾಧ್ಯವಿಲ್ಲ. ಅವರೇ ಬಂದು ನನ್ನನ್ನು ಭೇಟಿ ಮಾಡಿದರೆ ಎಲ್ಲಿಲ್ಲದ ಸಂತೋಷವಾಗಲಿದೆ ಎನ್ನುತ್ತಾರೆ ಬಸವರಾಜು.
ನನ್ನ ಮಗ ಬಸವರಾಜು ಹುಟ್ಟು ಅಂಗವಿಕಲ. 15 ವರ್ಷವಾಗಿದ್ದಾಗ ದರ್ಶನ್ ಸಿನಿಮಾ ನೋಡಿ ಅವರ ಅಭಿಮಾನಿಯಾಗಿದ್ದು, ಪ್ರತಿ ಉಸಿರಿನಲ್ಲೂ ಅವರನ್ನೇ ಧ್ಯಾನಿಸುತ್ತಾನೆ. ಅವನಿಗೆ ಸಹಕಾರ ಬೇಕಿದೆ ತಾಯಿ ರತ್ನಮ್ಮ ಹೇಳಿದರು.