ಕನಕಗಿರಿ: ಪ್ರಸ್ತುತ ದಿನಮಾನಗಳಲ್ಲಿ ಹಣ ಗಳಿಸುವುದಕ್ಕಿಂತ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸತೀಶ್ ಕುಮಾರ ಹೇಳಿದರು.
ಪಟ್ಟಣದ ಶುಭಶ್ರೀ ಮೆಡಿಕಲ್, ಮಾತೃಭೂಮಿ ಯುವಶಕ್ತಿ ಸಂಘ, ಗಂಗಾವತಿಯ ದ್ಯುತಿ ಸ್ಕಿನ್ ಕೇರ್, ಸ್ವಾಮಿ ವಿವೇಕಾನಂದ ಹಾಗೂ ತೇಜಸ್ವಿನಿ ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚರ್ಮ, ಲೈಂಗಿಕ ಹಾಗೂ ಶ್ವಾಸಕೋಶ ಉಚಿತ ತಪಾಸಣೆ ಶಿಬಿರದಲ್ಲಿ ಭಾನುವಾರ ಮಾತನಾಡಿದರು.
ಧೂಳು, ಧೂಮಪಾನ, ಮಧ್ಯಪಾನ ಸೇರಿ ನಾನಾ ಕಾರಣಗಳಿಂದ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಈ ಬಗ್ಗೆ ಜಾಗೃತರಾಗಿರಬೇಕು. ತಾಪಮಾನ ಸೇರಿ ವಿಟಮಿನ್ ಕೊರತೆಯಿಂದ ಚರ್ಮ ಸಂಬಂಧಿತ ರೋಗಗಳು ಬರುತ್ತಿದ್ದು ಇಂತಹ ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಚರ್ಮ, ಶ್ವಾಸಕೋಶ ಹಾಗೂ ಲೈಂಗಿಕ ಸಮಸ್ಯೆ ಇದ್ದವರಿಗೆ ಉಚಿತವಾಗಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಜನ ಚರ್ಮ ಹಾಗೂ ಶ್ವಾಸಕೋಶ ಸಮಸ್ಯೆ ಕುರಿತು ತಪಾಸಣೆ ಮಾಡಿಸಿಕೊಂಡರು. ಉಚಿತ ಔಷಧ ವಿತರಿಸಲಾಯಿತು. ಆರೋಗ್ಯ ಇಲಾಖೆಯ ಮಹಿಬೂಬು ಗಂಗಾವತಿ, ವೈದ್ಯರಾದ ಭರತ್, ಶ್ರೀನಿವಾಸಗೌಡ, ಪ್ರಮುಖರಾದ ಮಂಗಳೇಶ ಕಲಿಕೇರಿ ಇದ್ದರು.